ADVERTISEMENT

ವಿಶ್ವದ ಯಾವುದೇ ಶಕ್ತಿಯ ಮುಂದೆ ತಲೆಬಾಗಲ್ಲ: ಯೋಧರಿಗೆ ಧೈರ್ಯ ತುಂಬಿದ ಮೋದಿ

ಏಜೆನ್ಸೀಸ್
Published 3 ಜುಲೈ 2020, 12:58 IST
Last Updated 3 ಜುಲೈ 2020, 12:58 IST
ಯೋಧರ ಯೋಗಕ್ಷೇಮ ವಿಚಾರಿಸಿದ ಪ್ರಧಾನಿ ಮೋದಿ -ಎಎನ್‌ಐ ಚಿತ್ರ
ಯೋಧರ ಯೋಗಕ್ಷೇಮ ವಿಚಾರಿಸಿದ ಪ್ರಧಾನಿ ಮೋದಿ -ಎಎನ್‌ಐ ಚಿತ್ರ   

ಲೇಹ್: ‘ನಮ್ಮ ದೇಶ ಎಂದಿಗೂ ವಿಶ್ವದ ಯಾವುದೇ ಶಕ್ತಿಯ ಮುಂದೆಯೂ ತಲೆಬಾಗಿಲ್ಲ, ಮುಂದೆ ಬಾಗುವುದೂ ಇಲ್ಲ. ನಿಮ್ಮಂಥ ಧೈರ್ಯಶಾಲಿಗಳಿಂದಾಗಿ ಈ ಮಾತುಗಳನ್ನಾಡಲು ನಾನು ಶಕ್ತನಾಗಿದ್ದೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಯೋಧರನ್ನು ಉದ್ದೇಶಿಸಿ ಹೇಳಿದರು.

ಜೂನ್ 15ರಂದು ಗಾಲ್ವನ್ ಕಣಿವೆಯಲ್ಲಿ ಚೀನಾ ಪಡೆಗಳ ಜತೆ ನಡೆದ ಸಂಘರ್ಷದಲ್ಲಿ ಗಾಯಗೊಂಡು ಲೇಹ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಧರನ್ನು ಶುಕ್ರವಾರ ಭೇಟಿ ಮಾಡಿದ ಪ್ರಧಾನಿ, ಅವರ ಯೋಗಕ್ಷೇಮ ವಿಚಾರಿಸಿದರು.

‘ನಿಮಗೆ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಲು ನಾನಿಲ್ಲಿಗೆ ಬಂದಿದ್ದೇನೆ. ನಮ್ಮ ಭಾರತ ಸ್ವಾವಲಂಬಿಯಾಗಿದೆ. ನಮ್ಮ ದೇಶ ಎಂದಿಗೂ ವಿಶ್ವದ ಯಾವುದೇ ಶಕ್ತಿಯ ಮುಂದೆಯೂ ತಲೆಬಾಗಿಲ್ಲ, ಮುಂದೆ ಬಾಗುವುದೂ ಇಲ್ಲ. ನಿಮಗೆ ಮತ್ತು ನಿಮ್ಮಂಥ ಧೈರ್ಯಶಾಲಿಗಳಿಗೆ ಜನ್ಮ ನೀಡಿದ ತಾಯಂದಿರಿಗೆ ಗೌರವ ಸಲ್ಲಿಸುತ್ತೇನೆ. ನೀವೆಲ್ಲ ಬೇಗ ಗುಣಮುಖರಾಗುವಿರೆಂದು ನಂಬಿದ್ದೇನೆ’ ಎಂದು ಯೋಧರ ಬಳಿ ಪ್ರಧಾನಿ ಹೇಳಿದರು.

ADVERTISEMENT

ಯೋಧರನ್ನು ಶ್ಲಾಘಿಸಿದ ಪ್ರಧಾನಿ, ‘ನಮ್ಮನ್ನಗಲಿದ ಶೌರ್ಯವಂತರು ವಿನಾಕಾರಣ ನಮ್ಮನ್ನು ಬಿಟ್ಟುಹೋಗಿಲ್ಲ. ನೀವೆಲ್ಲ ತಕ್ಕ ತಿರುಗೇಟು ನೀಡಿದ್ದೀರಿ. ನಿಮ್ಮ ಧೈರ್ಯ, ನೀವು ಚೆಲ್ಲುವ ರಕ್ತವು ಯುವಕರಿಗೆ, ದೇಶವಾಸಿಗಳಿಗೆ ಮತ್ತು ಮುಂದಿನ ತಲೆಮಾರಿಗೆ ಸ್ಫೂರ್ತಿ ನೀಡಲಿದೆ’ ಎಂದರು.

‘ನೀವು ಸೂಕ್ತ ಉತ್ತರ ನೀಡಿದ್ದೀರಿ. ನಿವೀಗ ಆಸ್ಪತ್ರೆಯಲ್ಲಿದ್ದೀರಿ. ಹೀಗಾಗಿ ದೇಶದ 130 ಕೋಟಿ ಜನ ನಿಮ್ಮ ಬಗ್ಗೆ ಹೆಮ್ಮೆಪಡುತ್ತಿರುವುದು ನಿಮಗೆ ತಿಳಿದಿಲ್ಲದಿರಬಹುದು. ಧೈರ್ಯಶಾಲಿಗಳಾದ ನೀವು ತೋರಿದ ಶೌರ್ಯದಿಂದ ಇಡೀ ಜಗತ್ತಿಗೇ ಸಂದೇಶ ರವಾನೆಯಾಗಿದೆ’ ಎಂದು ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.