ADVERTISEMENT

ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಯತ್ನಕ್ಕೆ ಪೊಲೀಸರ ತಡೆ: ಎಎಪಿ ಖಂಡನೆ

ಪಿಟಿಐ
Published 26 ಮಾರ್ಚ್ 2024, 11:13 IST
Last Updated 26 ಮಾರ್ಚ್ 2024, 11:13 IST
<div class="paragraphs"><p>ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಎಎಪಿ ಕಾರ್ಯಕರ್ತರೊಬ್ಬರನ್ನು ಪೊಲೀಸರು ವಶಕ್ಕೆ ಪಡೆದರು</p></div>

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಎಎಪಿ ಕಾರ್ಯಕರ್ತರೊಬ್ಬರನ್ನು ಪೊಲೀಸರು ವಶಕ್ಕೆ ಪಡೆದರು

   

ಪಿಟಿಐ ಚಿತ್ರ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಬಂಧನ ವಿರೋಧಿಸಿ ಆಮ್‌ ಆದ್ಮಿ ಪಕ್ಷದ (ಎಎಪಿ) ನಾಯಕರು ಹಾಗೂ ಕಾರ್ಯಕರ್ತರು ಮಂಗಳವಾರ ಪ್ರತಿಭಟಿಸಿದರು.

ADVERTISEMENT

ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸಕ್ಕೆ ಘೇರಾವ್‌ ಹಾಕುವುದಕ್ಕಾಗಿ ಮೆರವಣಿಗೆಯಲ್ಲಿ ಹೊರಟಿದ್ದ ಪ್ರತಿಭಟನಕಾರರನ್ನು ಪೊಲೀಸರು ಪಟೇಲ್‌ ಚೌಕದಲ್ಲಿ ವಶಕ್ಕೆ ಪಡೆದರು. ಮೆರವಣಿಗೆಯುದ್ದಕ್ಕೂ ಪ್ರತಿಭಟನಕಾರರು ‘ಇನ್‌ಕ್ವಿಲಾಬ್‌ ಜಿಂದಾಬಾದ್‌’ ಹಾಗೂ ‘ಕೇಜ್ರಿವಾಲ್‌ ಜಿಂದಾಬಾದ್‌’ ಎಂಬ ಘೋಷಣೆಗಳನ್ನು ಕೂಗಿದರು.

ಎಎಪಿಯ ದೆಹಲಿ ಘಟಕದ ಸಂಚಾಲಕ ಗೋಪಾಲ್‌ ರಾಯ್, ಹಿರಿಯ ನಾಯಕರಾದ ಸೋಮನಾಥ್‌ ಭಾರ್ತಿ, ದೆಹಲಿ ವಿಧಾನ ಸಭೆಯ ಡೆಪ್ಯುಟಿ ಸ್ಪೀಕರ್ ರಾಖಿ ಬಿರ್ಲಾ, ಪಂಜಾಬ್‌ ಸಚಿವ ಹರ್ಜೋತ್‌ ಸಿಂಗ್‌ ಬೇಬ್ಸ್‌ ಮತ್ತಿತರರು ಪೊಲೀಸರು ವಶಕ್ಕೆ ತೆಗೆದುಕೊಂಡ ನಾಯಕರಲ್ಲಿ ಪ್ರಮುಖರು.

ನಂತರ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ದೆಹಲಿ ಘಟಕದ ಸಂಚಾಲಕ ಗೋಪಾಲ್‌ ರಾಯ್,‘ದೆಹಲಿಯಾದ್ಯಂತ ಕೇಂದ್ರ ಸರ್ಕಾರ ಸೆಕ್ಷನ್‌ 144ರಡಿ ನಿಷೇಧಾಜ್ಞೆ ಹೇರಿದೆ. ಈಗ ದೆಹಲಿ ‘ಪೊಲೀಸ್‌ ರಾಜ್ಯ’ವಾಗಿ ಪರಿವರ್ತನೆಯಾಗಿದೆ’ ಎಂದರು.

‘ಪೊಲೀಸ್‌ ಬಲ ಬಳಸಿಕೊಳ್ಳುವ ಮೂಲಕ ಈ ಚಳವಳಿಯನ್ನು ನಿಲ್ಲಿಸಲು ಸಾಧ್ಯ ಇಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಬಯಸುತ್ತೇನೆ. ಪಕ್ಷದ ಮಹಿಳಾ ಕಾರ್ಯಕರ್ತರನ್ನು ಸಹ ಎಳೆದಾಡಿ, ವಶಕ್ಕೆ ಪಡೆಯಲಾಗಿದೆ’ ಎಂದರು.

‘ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಪ್ರೀತಿಸುವವರು ಈ ದೇಶದಲ್ಲಿ ವಿಜೃಂಭಿಸುತ್ತಿರುವ ಸರ್ವಾಧಿಕಾರಿ ಧೋರಣೆಯ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರ್ಚ್‌ 31ರಂದು ರಾಮಲೀಲಾ ಮೈದಾನದಲ್ಲಿ ‘ಮಹಾರ‍್ಯಾಲಿ’ ನಡೆಸುವುದಕ್ಕೆ ಸಿದ್ಧತೆಗಳು ನಡೆಯುತ್ತಿವೆ’ ಎಂದು ಹೇಳಿದರು.

‘ಈ ರ‍್ಯಾಲಿಯಲ್ಲಿ ಲಕ್ಷಾಂತರ ಜನರು, ‘ಇಂಡಿಯಾ’ ಮೈತ್ರಿಕೂಟದ ಪ್ರಮುಖ ನಾಯಕರು ಪಾಲ್ಗೊಂಡು, ಕೇಜ್ರಿವಾಲ್‌ ಬಂಧನದ ವಿರುದ್ಧ ಧ್ವನಿ ಎತ್ತಲಿದ್ದಾರೆ’ ಎಂದೂ ರಾಯ್‌ ಹೇಳಿದರು.

ಭಾರಿ ಭದ್ರತೆ: ಎಎಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಪೊಲೀಸ್‌ ಬಂದೋಬಸ್ತ್ ಹಾಕಲಾಗಿತ್ತು.

ಅದರಲ್ಲೂ, ಪ್ರಧಾನಿ ನಿವಾಸ, ಕೇಂದ್ರೀಯ ದೆಹಲಿಯಲ್ಲಿ ಪೊಲೀಸರಲ್ಲದೇ, ಅರೆಸೇನಾ ಪಡೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಲೋಕ ಕಲ್ಯಾಣ ಮಾರ್ಗದ ಮೆಟ್ರೊ ನಿಲ್ದಾಣವನ್ನು ಮುಚ್ಚಲಾಗಿತ್ತು. ಪಟೇಲ್‌ ಚೌಕ್‌ ಬಳಿಯ ಮೆಟ್ರೊ ನಿಲ್ದಾಣದಲ್ಲಿ ಪ್ರವೇಶ ಮತ್ತು ನಿರ್ಗಮನವನ್ನು ನಿರ್ಬಂಧಿಸಲಾಗಿತ್ತು.

ಇದಕ್ಕೂ ಮುನ್ನ, ಪಟೇಲ್‌ ಚೌಕ್‌ ಬಳಿ ಪ್ರತಿಭಟನೆಗಾಗಿ ಜಮಾವಣೆಗೊಳ್ಳುವವರನ್ನು ಬಂಧಿಸಲಾಗುವುದು ಎಂದು ಡಿಸಿಪಿ (ನವದೆಹಲಿ) ದವೇಶ್‌ ಕುಮಾರ್ ಎಚ್ಚರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.