ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪಕ್ಕೆ ಸಂಬಂಧಿಸಿ ತಮ್ಮ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಾರದೇಕೆ ಎಂದು ಕಾರಣ ಕೇಳಿ, ದೇಶಭ್ರಷ್ಟ ವಜ್ರ ವ್ಯಾಪಾರಿ ನೀರವ್ ಮೋದಿಗೆ ಇಲ್ಲಿನ ವಿಶೇಷ ನ್ಯಾಯಾಲಯ ಸಾರ್ವಜನಿಕ ನೋಟಿಸ್ ಜಾರಿ ಮಾಡಿದೆ.
ವಿಚಾರಣೆಗಾಗಿ ಜೂನ್ 11ರಂದು ಕೋರ್ಟ್ಗೆ ಹಾಜರಾಗುವಂತೆ ವಿಶೇಷ ನ್ಯಾಯಾಧೀಶ ವಿ.ಸಿ.ಬರ್ಡೆ ಅವರು ಆರೋಪಿ ನೀರವ್ ಮೋದಿಗೆ ಸೂಚನೆ ನೀಡಿದ್ದಾರೆ. ಒಂದು ವೇಳೆ ನಿಗದಿತ ದಿನದಂದು ವಿಚಾರಣೆಗೆ ಹಾಜರಾಗದೇ ಇದ್ದಲ್ಲಿ ‘ದೇಶಭ್ರಷ್ಟರ ಆರ್ಥಿಕ ಅಪರಾಧಗಳ ಕಾಯ್ದೆ’ಯಡಿ (ಎಫ್ಇಒ) ಆರೋಪಿಯ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.
ನೀರವ್ ಪತ್ನಿ ಅಮಿ, ಸಹೋದರಿ ಪೂರ್ವಿ ಹಾಗೂ ಬಾಮೈದುನ ಮಯಂಕ್ ಮೆಹ್ತಾ ಅವರಿಗೂಇಂಥದೇ ನೋಟಿಸ್ಅನ್ನು ವಿಶೇಷ ನ್ಯಾಯಾಲಯ ಜಾರಿ ಮಾಡಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ₹ 14,000 ಕೋಟಿ ವಂಚಿಸಿದ ಆರೋಪವನ್ನು ನೀರವ್ ಮೋದಿ ಎದುರಿಸುತ್ತಿದ್ದಾರೆ. ಈ ಆರೋಪಗಳ ಕುರಿತು ಜಾರಿನಿರ್ದೇಶನಾಲಯ (ಇ.ಡಿ) ತನಿಖೆ ನಡೆಸುತ್ತಿದೆ. ಇ.ಡಿ ಮನವಿ ಮೇರೆಗೆ ವಿಶೇಷ ನ್ಯಾಯಾಲಯವು 2019ರ ಡಿಸೆಂಬರ್ನಲ್ಲಿ ನೀರವ್ ಮೋದಿಯನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.