ಏಕನಾಥ ಶಿಂದೆ ಮತ್ತು ಕುನಾಲ್ ಕಾಮ್ರಾ
ಪುಣೆ: ‘ಪಕ್ಷದ ಕಾರ್ಯಕರ್ತರ ತಾಳ್ಮೆಯನ್ನು ಪರೀಕ್ಷಿಸಬೇಡಿ, ಕಾಮಿಡಿಯನ್ ಕುನಾಲ್ ಕಾಮ್ರಾನನ್ನು ಆದಷ್ಟು ಬೇಗ ಬಂಧಿಸಿ’ ಎಂದು ಮಹಾರಾಷ್ಟ್ರ ಪ್ರವಾಸೋದ್ಯಮ ಸಚಿವ ಮತ್ತು ಶಿವಸೇನಾ ನಾಯಕ ಶಂಭುರಾಜ್ ದೇಸಾಯಿ ಪೊಲೀಸರಿಗೆ ತಾಕೀತು ಮಾಡಿದ್ದಾರೆ.
2022ರಲ್ಲಿ ಏಕನಾಥ ಶಿಂದೆ ಅವರು ಉದ್ಧವ್ ಠಾಕ್ರೆ ವಿರುದ್ಧ ನಡೆಸಿದ ಬಂಡಾಯವನ್ನು ವಿವರಿಸಲು ಕುನಾಲ್ ಅವರು ‘ದಿಲ್ ತೊ ಪಾಗಲ್ ಹೈ’ ಸಿನಿಮಾದ ಹಾಡೊಂದನ್ನು ಮಾರ್ಪಾಡು ಮಾಡಿ ಹಾಡಿದ್ದರು. ಇದರಿಂದ ಕೆರಳಿದ ಶಿವಸೇನಾ ಕಾರ್ಯಕರ್ತರು ಕುನಾಲ್ ಅವರು ಈ ಹಾಡನ್ನು ಹೇಳಿದ್ದ ಕಾರ್ಯಕ್ರಮ ಚಿತ್ರೀಕರಿಸಿದ್ದ ‘ಹ್ಯಾಬಿಟ್ಯಾಟ್ ಸ್ಟುಡಿಯೊ’ದಲ್ಲಿ ಭಾನುವಾರ ರಾತ್ರಿ ದಾಂದಲೆ ನಡೆಸಿದ್ದರು.
‘ಸಂಯಮದಿಂದ ಇರುವಂತೆ ಶಿಂಧೆ ಅವರು ಹೇಳಿದ್ದಾರೆ. ಅದಕ್ಕಾಗಿ ನಾವು ಸುಮ್ಮನಿದ್ದೇವೆ. ಎಲ್ಲಿ ಅಡಗಿದ್ದರೂ ಕಾಮ್ರಾನನ್ನು ಹೊರಗೆಳೆದು ತರುವುದು ಹೇಗೆ ಎನ್ನುವುದು ಶಿವಸೇನಾ ಕಾರ್ಯಕರ್ತರಾಗಿ ನಮಗೆ ತಿಳಿದಿದೆ. ಆದರೆ ಸಚಿವರಾಗಿ ನಮಗೆ ಕೆಲವು ನಿರ್ಬಂಧಗಳು ಅಡ್ಡಿಯಾಗುತ್ತಿವೆ. ಹೀಗಾಗಿ ಆತ ಎಲ್ಲಿದ್ದರೂ ಹೊರಗೆಳೆದು ತನ್ನಿ, ಕಠಿಣ ಶಿಕ್ಷೆ ನೀಡಿ ಎಂದು ನಾವು ಪೊಲೀಸರನ್ನು ಕೇಳುತ್ತಿದ್ದೇವೆ’ ಎಂದು ಸಚಿವರು ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಆಕ್ರೋಶ ಹೊರಹಾಕಿದ್ದಾರೆ.
ಈಗಾಗಲೇ ಕಾಮ್ರಾ ವಿರುದ್ಧ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಅಲ್ಲದೆ ಕುನಾಲ್ ಕಾಮ್ರಾ ಅವರು ಹಾಸ್ಯ ಕಾರ್ಯಕ್ರಮ ನಡೆಸಿದ್ದ ಸ್ಟುಡಿಯೊದ ‘ಅಕ್ರಮ ಭಾಗ’ವನ್ನು ಬೃಹನ್ ಮುಂಬೈ ಮಹಾನಗರ ಪಾಲಿಕೆಯು ತೆರವುಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.