ನವದೆಹಲಿ: ಭಯೋತ್ಪಾದಕನಾಗಿ, ನಂತರ ಪರಿವರ್ತನೆಗೊಂಡು ಸೇನೆಗೆ ಸೇರಿ ಹುತಾತ್ಮರಾಗಿದ್ದ ಲ್ಯಾನ್ಸ್ ನಾಯಕ್ ನಜೀರ್ ಅಹ್ಮದ್ ವಾನಿ ಅವರಿಗೆ ಮರಣೋತ್ತರವಾಗಿ ಘೋಷಿಸಲಾಗಿದ್ದ ‘ಅಶೋಕ ಚಕ್ರ’ಗೌರವವನ್ನು, ಹುತಾತ್ಮ ಯೋಧನಪತ್ನಿ ಮಹಜಬೀನ್ ಸ್ವೀಕರಿಸಿದರು.
ಯುದ್ಧ ಭೂಮಿಯಲ್ಲಿ ಅಪ್ರತಿಮ ಸಾಹಸ, ಕೆಚ್ಚೆದೆಯ ಹೋರಾಟ ನಡೆಸಿ ಹುತಾತ್ಮರಾದ ಯೋಧರಿಗೆ ನೀಡಲಾಗುವ ಸೇನೆಯ ಶಾಂತಿಕಾಲದ ಅತ್ಯುನ್ನತ ಸೇನಾ ಗೌರವವನ್ನುಗಣರಾಜ್ಯೋತ್ಸವ ದಿನದಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರದಾನ ಮಾಡಿದರು.
38 ವರ್ಷದ ವಾನಿ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನ ಅಶ್ಮುಜಿಯವರು. ಮೊದಲಿಗೆ ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರಾಗಿ ಸೇನೆಯ ವಿರುದ್ಧವೇ ಹೋರಾಡುತ್ತಿದ್ದರು. 2004ರಲ್ಲಿ ಮನಃಪರಿವರ್ತನೆಗೊಂಡು, ಭಾರತೀಯ ಸೇನೆ ಸೇರಿ ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಶೋಪಿಯಾನ್ ಜಿಲ್ಲೆಯ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಕೆಚ್ಚೆದೆಯ ಹೋರಾಟವನ್ನು ಪ್ರದರ್ಶಿಸಿ, ಹುತಾತ್ಮರಾಗಿದ್ದರು.
ಹುತಾತ್ಮರಾಗುವ ಮುನ್ನ ಅಸಾಧಾರಣ ಹೋರಾಟ ನಡೆಸಿದ್ದ ’ವಾನಿಗೆ ಸೇನಾ ಮೆಡಲ್‘ಅನ್ನೂ ನೀಡಿ ಗೌರವಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.