ನವದೆಹಲಿ: ಕೋವಿಡ್-19ಗೆ ಪಶ್ಚಿಮ ಬಂಗಾಳದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಮೃತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಈ ಬೆನ್ನಲ್ಲೇ ಕೇಂದ್ರ ಸರ್ಕಾರವು ಖಾಸಗಿ ಮತ್ತು ಸಾರ್ವಜನಿಕ ರಂಗದ ಉದ್ಯೋಗಸ್ಥರಿಗೆ ಸಲಹೆಯನ್ನು ನೀಡಿದೆ.
ಕೋವಿಡ್-19ನಿಂದಾಗಿ ಯಾವುದೇ ಉದ್ಯೋಗಿಗಳಿಗೆ ಸಂಬಳ ಕಡಿತಗೊಳಿಸುವುದು ಅಥವಾ ಕೆಲಸದಿಂದ ತೆಗೆಯುವುದನ್ನು ಉದ್ಯೋಗಸ್ಥರು ಮಾಡಬಾರದು. ಅಲ್ಲದೆ ದೇಶದಲ್ಲಿ ಕೋವಿಡ್-19 ಹೆಸರಿನಲ್ಲಿ ಈಶಾನ್ಯದ ಜನರ ಮೇಲೆ ದೌರ್ಜನ್ಯ ಎಸಗಿದ್ದು ಕಂಡು ಬಂದರೆ ಕೂಡಲೇ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚಿಸಿದೆ.
ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ನಿರ್ಧರಿಸಿ, ಇದುವರೆಗೂ 19 ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲು ತೀರ್ಮಾನಿಸಿದೆ. ಛತ್ತೀಸಗಡ, ದೆಹಲಿ, ಗೋವಾ, ಜಮ್ಮು ಮತ್ತು ಕಾಶ್ಮೀರ, ನಾಗಾಲ್ಯಾಂಡ್, ರಾಜಸ್ಥಾನ್, ಉತ್ತರಾಖಂಡ್, ಪಶ್ಚಿಮ ಬಂಗಾಳ, ಲಡಾಖ್, ಜಾರ್ಖಂಡ್, ಅರುಣಾಚಲ್ ಪ್ರದೇಶ, ಬಿಹಾರ, ತ್ರಿಪುರ, ತೆಲಂಗಾಣ, ಪಂಜಾಬ್ ರಾಜ್ಯಗಳಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಿಸಲಾಗಿದೆ.
ದೇಶದಲ್ಲಿ ಈಗಾಗಲೇ 8 ಜನರು ಕೊರೊನಾ ವೈರಸ್ಗೆ ಬಲಿಯಾಗಿದ್ದು, ನಿನ್ನೆಯಷ್ಟೇ ಪ್ರಧಾನಿ ಮೋದಿ ಅವರು ಕರೆ ನೀಡಿದಂತೆ ಜನತಾ ಕರ್ಫ್ಯೂಗೆ ಜನರು ಬೆಂಬಲ ಸೂಚಿಸಿದ್ದರು. ಹೀಗಿದ್ದರೂ ನಿನ್ನೆಯೇ ಅತಿಹೆಚ್ಚು ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದವು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಇಂದು ಮತ್ತಷ್ಟು ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.