ನವದೆಹಲಿ: ‘ಶಾಲಾ ಶುಲ್ಕಗಳನ್ನು ಅನಿಯಂತ್ರಿತವಾಗಿ ಹೆಚ್ಚಳ ಮಾಡಿರುವ ಕುರಿತು ವ್ಯಾಪಕ ದೂರುಗಳು ಬಂದಿದ್ದು, ಅಂಥ ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ’ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಮಂಗಳವಾರ ಹೇಳಿದ್ದಾರೆ.
‘ಕಳುಹಿಸಲಾದ ನೋಟಿಸ್ಗೆ ಉತ್ತರಿಸುವಂತೆ ಶಾಲೆಗಳಿಗೆ ತಾಕೀತು ಮಾಡಲಾಗಿದೆ. ಉತ್ತರಿಸದಿದ್ದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
‘ಜನ ಸಂವಾದ‘ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಂದರ್ಭದಲ್ಲಿ, ಖಾಸಗಿ ಶಾಲೆಗಳಿಂದ ಅನಿಯಂತ್ರಿತ ಶುಲ್ಕ ಹೆಚ್ಚಳ ಸಂಬಂಧ ದೂರುಗಳು ಸಲ್ಲಿಕೆಯಾಗಿದ್ದವು. ಶುಲ್ಕ ಭರಿಸದಿದ್ದಲ್ಲಿ ಅಂಥ ಮಕ್ಕಳನ್ನು ಶಾಲೆಯಿಂದ ಹೊರಹಾಕಲಾಗುತ್ತಿದೆ ಎಂದು ಹಲವರು ದೂರಿದ್ದರು.
ಈ ವಿಷಯವನ್ನು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡಿರುವ ರೇಖಾ ಗುಪ್ತಾ, ‘ಮಾಡೆಲ್ ಟೌನ್ನಲ್ಲಿರುವ ಕ್ವೀನ್ ಮೇರಿ ಶಾಲೆಯಲ್ಲಿ ಅನಿಯಂತ್ರಿತವಾಗಿ ಶುಲ್ಕ ಹೆಚ್ಚಿಸಲಾಗಿದೆ ಎಂಬ ದೂರುಗಳು ಕೇಳಿಬಂದಿದ್ದವು. ಶುಲ್ಕ ಭರಿಸದ ಮಕ್ಕಳನ್ನು ಶಾಲೆಯಿಂದ ಹೊರಹಾಕಲಾಗುತ್ತಿದೆ ಎಂದು ಪಾಲಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಶಾಲೆಗೆ ಭೇಟಿ ನೀಡಿ, ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ’ ಎಂದಿದ್ದಾರೆ.
‘ಶುಲ್ಕದ ನೆಪದಲ್ಲಿ ಪಾಲಕರನ್ನು ಶೋಷಿಸುವ ಹಕ್ಕು ಯಾವುದೇ ಶಾಲೆಗಳಿಗೂ ಇಲ್ಲ. ಅದರಲ್ಲೂ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕುವುದು ನ್ಯಾಯವಲ್ಲ. ಎಲ್ಲಾ ಶಾಲೆಗಳೂ ನಿರ್ದಿಷ್ಟ ಕಾನೂನನ್ನು ಪಾಲಿಸಲೇಬೇಕು. ಅದನ್ನು ಉಲ್ಲಂಘಿಸಿದಲ್ಲಿ ಕ್ರಮ ಎದುರಿಸಲು ಸಜ್ಜಾಗಬೇಕು’ ಎಂದು ಎಚ್ಚರಿಸಿದ್ದಾರೆ.
‘ಯಾವುದೇ ರೀತಿಯ ಅನ್ಯಾಯ, ಅಕ್ರಮ ಹಾಗೂ ಶೋಷಣೆಗಳ ಕುರಿತು ರಾಜ್ಯದಲ್ಲಿ ಶೂನ್ಯ ಸಹಿಷ್ಣುತೆ ಜಾರಿಯಲ್ಲಿದೆ. ಯಾವುದೇ ನಿರ್ಲಕ್ಷ್ಯವನ್ನು ಸಹಿಸಲಾಗದು. ಪ್ರತಿಯೊಂದು ಮಗುವಿಗೂ ನ್ಯಾಯ, ಘನತೆ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ನಾವು ಬದ್ಧ. ದೆಹಲಿಯಲ್ಲಿ ಶಿಕ್ಷಣದಲ್ಲಿ ಸಂಪೂರ್ಣ ಪಾರದರ್ಶಕತೆ, ಮಕ್ಕಳ ಶಿಕ್ಷಣ ಹಕ್ಕುಗಳಲ್ಲಿ ಸಮಾನ ಅವಕಾಶ ಮತ್ತು ಖಾತ್ರಿ ನೀಡಲಾಗುವುದು’ ಎಂದು ಗುಪ್ತಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.