ಲಖನೌ: ಉತ್ತರ ಪ್ರದೇಶದಲ್ಲಿ ತಮ್ಮ ಮತಗಳನ್ನು ಕ್ರೋಡೀಕರಿಸುವುದಕ್ಕಾಗಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳು ಧ್ರುವೀಕರಣ ತಂತ್ರ ಅನುಸರಿಸುತ್ತಿವೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮಂಗಳವಾರ ಆರೋಪಿಸಿದ್ದಾರೆ.
ಆಡಳಿತ ಪಕ್ಷವು ಜನರನ್ನು ವಿಭಜಿಸುವ ವಾಕ್ಚಾತುರ್ಯದ ಫಲಾನುಭವಿಯಾಗಬಹುದು. ಹೀಗಾಗಿ ಧರ್ಮ ಅಥವಾ ಜಾತಿಯ ಆಧಾರದಲ್ಲಿ ಜನರನ್ನು ವಿಭಜಿಸದೇ ಇರುವ ಇನ್ನೊಂದು ಮಾದರಿಯ ರಾಜಕೀಯವನ್ನು ಮತದಾರರು ಆಯ್ಕೆ ಮಾಡಬೇಕಿದೆ ಎಂದು ಅವರು ಹೇಳಿದ್ದಾರೆ.
ಲಖಿಂಪುರ ಖೇರಿ ಘಟನೆಯು ರೈತರಿಗೆ ತೀವ್ರವಾದ ನೋವು ಉಂಟು ಮಾಡಿದೆ. ರೈತರ ಕುರಿತು ಸರ್ಕಾರದ ಉದಾಸೀನ ಮತ್ತು ಹಗೆತನದ ಧೋರಣೆಯು ಪಶ್ಚಿಮ ಉತ್ತರ ಪ್ರದೇಶ ಭಾಗದಲ್ಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ನಿರ್ಧರಿಸುವಲ್ಲಿ ಮುಖ್ಯ ಪಾತ್ರವಹಿಸಲಿದೆ ಎಂದು ‘ಪಿಟಿಐ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಪ್ರಿಯಾಂಕಾ ಅಭಿಪ್ರಾಯಪಟ್ಟಿದ್ದಾರೆ.
ಚುನಾವಣೋತ್ತರ ಮೈತ್ರಿ ಮಾಡಬೇಕಾದಂಥ ಸಂದರ್ಭ ಬಂದರೆ ಆ ಕುರಿತು ಫಲಿತಾಂಶದ ಬಳಿಕ ಪಕ್ಷವು ಚರ್ಚಿಸಲಿದೆ ಎಂದು ಅವರು ಹೇಳಿದ್ದಾರೆ.
ಮಹಿಳೆಯರಿಗೆ ಶೇ 40ರಷ್ಟು ಟಿಕೆಟ್ ನೀಡುವ ಪಕ್ಷದ ನಿಲುವನ್ನು ಅವರು ಸಮರ್ಥಿಸಿದ್ದಾರೆ. ಒಟ್ಟು ಜನಸಂಖ್ಯೆಯ ಶೇ 50ರಷ್ಟಿರುವ ಮಹಿಳೆಯರಿಗೆ ಚುನಾವಣೆಯಲ್ಲಿ ಪ್ರಾತಿನಿಧ್ಯ ನೀಡುವುದರಿಂದ ಅವರಿಗೆ ರಾಜಕೀಯವಾಗಿ ತಮ್ಮನ್ನು ಗುರುತಿಸಿಕೊಳ್ಳಲು ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶ ಚುನಾವಣೆಯ ಪ್ರಮುಖ ವಿಚಾರಗಳೇನು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಕೃಷಿ ಕಾಯ್ದೆಗಳು ಹಾಗೂ ಲಖಿಂಪುರ ಖೇರಿ ಪ್ರಕರಣ ಪರಿಣಾಮ ಬೀರಲಿದೆ ಎಂದಿದ್ದಾರೆ. ವಿವಿಧ ರಾಜಕೀಯ ಪಕ್ಷಗಳು ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿವೆ. ಕೆಲವೊಂದು ಪಕ್ಷಗಳು ಜಾತಿ, ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುತ್ತಿವೆ ಎಂದು ಅವರು ದೂರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.