ADVERTISEMENT

‘ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಅಪಘಾತಕ್ಕೆ ಅಸ್ಪಷ್ಟ ಗೋಚರವೇ ಕಾರಣ’

ಕಳೆದ ವರ್ಷ ಕೋಯಿಕ್ಕೋಡ್‌ ವಿಮಾನನಿಲ್ದಾಣದಲ್ಲಿ ಅವಘಡ

ಪಿಟಿಐ
Published 12 ಸೆಪ್ಟೆಂಬರ್ 2021, 13:43 IST
Last Updated 12 ಸೆಪ್ಟೆಂಬರ್ 2021, 13:43 IST
ಕೋಯಿಕ್ಕೋಡ್‌ನ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ರನ್‌ವೆ ದಾಟಿ, ಪ್ರಪಾತದಲ್ಲಿ ಬಿದ್ದು ಹೋಳಾಗಿರುವುದು (ಸಂಗ್ರಹ ಚಿತ್ರ) –ಎಎಫ್‌ಪಿ ಚಿತ್ರ
ಕೋಯಿಕ್ಕೋಡ್‌ನ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ರನ್‌ವೆ ದಾಟಿ, ಪ್ರಪಾತದಲ್ಲಿ ಬಿದ್ದು ಹೋಳಾಗಿರುವುದು (ಸಂಗ್ರಹ ಚಿತ್ರ) –ಎಎಫ್‌ಪಿ ಚಿತ್ರ   

ನವದೆಹಲಿ: ಮಳೆಯಿಂದಾಗಿ ಅಸ್ಪಷ್ಟ ಗೋಚರ ಹಾಗೂ ವಿಂಡ್‌ಶೀಲ್ಡ್‌ ವೈಪರ್‌ನ ಕಾರ್ಯಕ್ಷಮತೆ ಕುಂದಿದ್ದರಿಂದ ಪೈಲಟ್‌ಗೆ ತೊಂದರೆಯಾಗಿದೆ. ಕಳೆದ ವರ್ಷ ಕೋಯಿಕ್ಕೋಡ್‌ನ ವಿಮಾನನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಅಪಘಾತಕ್ಕೀಡಾಗಲು ಈ ಅಂಶಗಳೇ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.

ಏರ್‌ಕ್ರಾಫ್ಟ್‌ ಆ್ಯಕ್ಸಿಡೆಂಟ್‌ ಇನ್ವೆಸ್ಟಿಗೇಷನ್ ಬ್ಯುರೊ (ಎಎಐಬಿ) ಸಿದ್ಧಪಡಿಸಿರುವ ವರದಿಯಲ್ಲಿ, ವಿಮಾನ (ಎಎಕ್ಸ್‌ಬಿ 1344) ಅಪಘಾತಕ್ಕೀಡಾಗಲು ಕಾರಣವಾಗಿರಬಹುದಾದ ಹಲವಾರು ಅಂಶಗಳನ್ನು ವಿವರಿಸಲಾಗಿದೆ.

ಮಳೆ ಬೀಳುತ್ತಿದ್ದ ಕಾರಣ, ಲ್ಯಾಂಡಿಂಗ್‌ ವೇಳೆ ಪೈಲಟ್‌ಗೆ ಸರಿಯಾಗಿ ರನ್‌ವೇ ಕಾಣಲಿಲ್ಲ. ಲ್ಯಾಂಡಿಂಗ್‌ಗೆ ಅಗತ್ಯವಿರುವ ಅಂತರ ಹಾಗೂ ಇತರ ಅಂಶಗಳ ಕುರಿತು ಇದು ತಪ್ಪುಗ್ರಹಿಕೆಗೆ ಕಾರಣವಾಯಿತು.

ADVERTISEMENT

ಅಲ್ಲದೇ, ಪ್ರಮಾಣಿತ ಕಾರ್ಯಾಚರಣೆ ವಿಧಾನದಂತೆ (ಎಸ್‌ಒಪಿ) ವಿಮಾನ ಹಾರಾಟದ ಮೇಲೆ ನಿಗಾ ಇಡುವುದು, ಸೂಚನೆಗಳನ್ನು ನೀಡುವುದು ಹಾಗೂ ಕ್ರಮ ಕೈಗೊಳ್ಳುವುದು ಸಾಧ್ಯವಾಗಲಿಲ್ಲ. ಈ ಎಲ್ಲ ಅಂಶಗಳು ಅವಘಡಕ್ಕೆ ಕಾರಣವಾದವು ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಎಸ್‌ಒಪಿಯಂತೆ ಪೈಲಟ್‌ ಕಾರ್ಯಾಚರಣೆ ಮಾಡದೇ ಇದ್ದುದು ಸಹ ಅಪಘಾತಕ್ಕೆ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ಈ ನತದೃಷ್ಟ ವಿಮಾನ, ಕಳೆದ ವರ್ಷ ಆಗಸ್ಟ್‌ 7ರಂದು ಲ್ಯಾಂಡಿಂಗ್‌ ಆಗುವ ವೇಳೆ, ರನ್‌ವೇಯಿಂದ ಮುಂದಕ್ಕೆ ಚಲಿಸಿ, 110 ಅಡಿ ಆಳದಲ್ಲಿ ಬಿದ್ದು, ಮೂರು ಹೋಳಾಗಿತ್ತು.

ಈ ಅಪಘಾತದಲ್ಲಿ, ಇಬ್ಬರು ಪೈಲಟ್‌ ಹಾಗೂ ಮೂರು ಶಿಶುಗಳು ಸೇರಿ 19 ಪ್ರಯಾಣಿಕರು ಮೃತಪಟ್ಟಿದ್ದರು. 190 ಜನ ಪ್ರಯಾಣಿಕರಿದ್ದ ಈ ವಿಮಾನ ದುಬೈನಿಂದ ಹೊರಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.