ನವದೆಹಲಿ: ಕಣ್ಣಿರು ಸುರಿಸುವುದರ ಮೂಲಕ ರೈತ ನಾಯಕ ರಾಕೇಶ್ ಟಿಕಾಯತ್ ಅವರು ಟ್ರ್ಯಾಕ್ಟರ್ ರ್ಯಾಲಿ ಹಿಂಸಾಚಾರ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬಿಜೆಪಿ ಮುಖಂಡ ಕೆ.ಜೆ.ಅಲ್ಫೋನ್ಸ್ ಕಣ್ಣಂತಾನಂ ಹೇಳಿದ್ದಾರೆ.
ರಾಜ್ಯಸಭೆ ಕಲಾಪದಲ್ಲಿ ಶುಕ್ರವಾರ ಮಾತನಾಡಿರುವ ಮಾಜಿ ಕೇಂದ್ರ ಸಚಿವ ಅಲ್ಫೋನ್ಸ್ ಅವರು, 'ಕೆಂಪುಕೋಟೆಯ ಮೇಲೆ ಧಾರ್ಮಿಕ ಧ್ವಜವನ್ನು ಹಾರಿಸುವುದು ದೇಶದ್ರೋಹದ ಕೃತ್ಯವಾಗಿದೆ. ರೈತರ ಆಂದೋಲನವನ್ನು ರಾಕೇಶ್ ಟಿಕಾಯತ್ ಮುನ್ನೆಡೆಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ ನಡೆದಿದ್ದ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಹಿಂಸಾಚಾರ ಸಂಭವಿಸಿದೆ. ಆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಟಿಕಾಯತ್ ಕಣ್ಣೀರು ಸುರಿಸಿದ್ದಾರೆ. ಆದರೆ, ಅದು ಸಾಧ್ಯವಿಲ್ಲ' ಎಂದು ತಿಳಿಸಿದ್ದಾರೆ.
ಇದೇ ವೇಳೆ ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡಿರುವ ಅಲ್ಫೋನ್ಸ್ 'ಅವುಗಳಲ್ಲಿ ಯಾವುದೇ ತಪ್ಪಿಲ್ಲ' ಎಂದಿದ್ದಾರೆ.
ಕೃಷಿ ಕಾಯ್ದೆ ವಿಚಾರದಲ್ಲಿ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಭಿನ್ನಾಭಿಪ್ರಾಯ ಮತ್ತು ದ್ವೇಷದ ಬೀಜಗಳನ್ನು ಬಿತ್ತುತ್ತಿವೆ ಎಂದು ಅಲ್ಫೋನ್ಸ್ ಆರೋಪಿಸಿದ್ದಾರೆ.
'ನೀವು ಸರ್ಕಾರದ ವಿರುದ್ಧ ದ್ವೇಷದ ಬೀಜ ಬಿತ್ತುತ್ತಿದ್ದೀರಿ. ಆ ಮೂಲಕ ನೀವು ಉಗ್ರವಾದದ ಬೀಜಗಳ ಬಿತ್ತುವಿಕೆಗೆ ಬೆಂಬಲಿಸುತ್ತಿದ್ದೀರಿ. ಕೆಂಪು ಕೋಟೆಯಲ್ಲಿ ನಡೆದದ್ದು ದೇಶದ್ರೋಹ. ದೇಶದ್ರೋಹವಲ್ಲದಿದ್ದರೆ, ಅದು ಏನೆಂಬುದನ್ನು ಹೇಳಿ?' ಎಂದು ಅವರು ಪ್ರತಿಪಕ್ಷಗಳಿಗೆ ಪ್ರಶ್ನೆ ಮಾಡಿದ್ದಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.