ಚಂಡೀಗಡ: ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯ ವಿರುದ್ಧ ಪಂಜಾಬ್ ವಿಧಾನಸಭೆಯಲ್ಲಿ ಗುರುವಾರ ನಿರ್ಣಯವನ್ನು ಅಂಗೀರಿಸಲಾಯಿತು
’ಕೇಂದ್ರವು ಹೊರಡಿಸಿರುವ ಅಧಿಸೂಚನೆಯಿಂದ, ರಾಜ್ಯ ಪೊಲೀಸರಿಗೆ ಅವಮಾನವಾಗಿದೆ. ಕೂಡಲೇ ಇದನ್ನು ಹಿಂದಕ್ಕೆ ಪಡೆಯಬೇಕು’ ಎಂದು ನಿರ್ಣಯದ ಮೂಲಕ ಕೇಂದ್ರವನ್ನು ಒತ್ತಾಯಿಸಲಾಯಿತು.
’ಪಂಜಾಬ್ ಹುತಾತ್ಮರ ನಾಡು. ಇಲ್ಲಿನ ಜನರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಮಾಡಿದ್ದಾರೆ’ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ’ಪಂಜಾಬ್ ಪೊಲೀಸರು ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಭಾರತದ ಸಂವಿಧಾನದ ಪ್ರಕಾರ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಆ ವಿಷಯದಲ್ಲಿ ಪಂಜಾಬ್ ಸರ್ಕಾರವು ಸಂಪೂರ್ಣ ಸಮರ್ಥವಾಗಿದೆ’ ಎಂದು ನಿರ್ಣಯದಲ್ಲಿ ಹೇಳಲಾಗಿದೆ.
ಗಡಿ ಭದ್ರತಾ ಪಡೆಯ ಯೋಧರಿಗೆ ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯದ ಅಂತರರಾಷ್ಟ್ರೀಯ ಗಡಿಯಲ್ಲಿ ಶೋಧಕಾರ್ಯ, ವಶಪಡಿಸಿಕೊಳ್ಳುವಿಕೆ ಮತ್ತು ಬಂಧಿಸುವಂತಹ ವ್ಯಾಪ್ತಿಯ ಮಿತಿಯನ್ನು 15 ಕಿ.ಮೀ.ಯಿಂದ 50 ಕಿ.ಮೀ.ಗೆ ವಿಸ್ತರಿಸಿ ಕೇಂದ್ರ ಸರ್ಕಾರ ಕಳೆದ ತಿಂಗಳು ಬಿಎಸ್ಎಫ್ ಕಾಯ್ದೆಗೆ ತಿದ್ದುಪಡಿ ತಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.