ADVERTISEMENT

ಪಂಜಾಬ್ ವಿಧಾನಸಭೆಯಲ್ಲಿ ಮೃತ ರೈತ ಶುಭಕರನ್ ಸಿಂಗ್‌ಗೆ ಶ್ರದ್ಧಾಂಜಲಿ

ಪಿಟಿಐ
Published 1 ಮಾರ್ಚ್ 2024, 11:05 IST
Last Updated 1 ಮಾರ್ಚ್ 2024, 11:05 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಂಡೀಗಢ: ರೈತರು ಮತ್ತು ಹರಿಯಾಣದ ಭದ್ರತಾ ಸಿಬ್ಬಂದಿ ನಡುವಿನ ಘರ್ಷಣೆಯಲ್ಲಿ ಮೃತಪಟ್ಟ ರೈತ ಶುಭಕರನ್ ಸಿಂಗ್ ಅವರಿಗೆ ಪಂಜಾಬ್ ವಿಧಾನಸಭೆಯಲ್ಲಿ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಇತ್ತೀಚೆಗೆ ನಿಧನರಾದ ಮಾಜಿ ಉಪ ಸಭಾಪತಿ ಮತ್ತು ಮಾಜಿ ಸಚಿವ ಬಲದೇವ್ ರಾಜ್ ಚಾವ್ಲಾ, ಮಾಜಿ ಶಾಸಕರಾದ ರಂಜಿತ್ ಸಿಂಗ್ ತಲ್ವಂಡಿ, ಪ್ರಕಾಶ್ ಸಿಂಗ್ ಗಹರ್ದಿವಾಲಾ ಮತ್ತು ಸೋಹನ್ ಸಿಂಗ್ ಅವರಿಗೆ ಸದನದ ಸದಸ್ಯರು ನಮನ ಸಲ್ಲಿಸಿದರು.

ADVERTISEMENT

ಅಲ್ಲದೇ ಅಗ್ನಿವೀರ್ ಅಜಯ್ ಕುಮಾರ್ ಮತ್ತು ಸೇನಾ ಯೋಧ ಗುರುಪ್ರೀತ್ ಸಿಂಗ್ ಅವರನ್ನೂ ಸ್ಮರಿಸಲಾಯಿತು. ಸದನದಲ್ಲಿ ಅಗಲಿದವರ ಸ್ಮರಣೆಗಾಗಿ 2 ನಿಮಿಷಗಳ ಮೌನಾಚರಣೆ ಮಾಡಲಾಯಿತು.

ಫೆಬ್ರುವರಿ 21 ರಂದು ಪಂಜಾಬ್-ಹರಿಯಾಣ ಗಡಿಯಲ್ಲಿರುವ ಖನೌರಿಯಲ್ಲಿ ನಡೆದ ಘರ್ಷಣೆಯಲ್ಲಿ ಶುಭಕರನ್ (21) ಮೃತಪಟ್ಟಿದ್ದರು. ಘಟನೆಯಲ್ಲಿ 12 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಗಡಿಯಲ್ಲಿ ಮೊಕ್ಕಾಂ ಹೂಡಿದ್ದ ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳತ್ತ ಮುನ್ನುಗ್ಗಲು ಯತ್ನಿಸಿದಾಗ ಘರ್ಷಣೆ ನಡೆದಿತ್ತು.

ಶುಭಕರನ್ ಅವರ ಪಾರ್ಥಿವ ಶರೀರವನ್ನು ಗುರುವಾರ ಬಟಿಂಡಾದ ಅವರ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನು ಖಾತ್ರಿ ಹಾಗೂ ಕೃಷಿ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ರೈತರ 'ದೆಹಲಿ ಚಲೋ' ಮೆರವಣಿಗೆಯನ್ನು ನಡೆಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.