ADVERTISEMENT

ಭದ್ರತಾ ಸಿಬ್ಬಂದಿ ತಗ್ಗಿಸಿ: ಸಂಪುಟ ಸಹೋದ್ಯೋಗಿಗಳಿಗೆ ಪಂಜಾಬ್ ಸಿಎಂ ಸಲಹೆ

ಪಿಟಿಐ
Published 27 ಸೆಪ್ಟೆಂಬರ್ 2021, 17:18 IST
Last Updated 27 ಸೆಪ್ಟೆಂಬರ್ 2021, 17:18 IST
ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ
ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ   

ಚಂಡೀಗಡ: 'ವಿಐಪಿ ಸಂಸ್ಕೃತಿ'ಯನ್ನು ನಿಗ್ರಹಿಸುವ ಅಗತ್ಯವನ್ನು ಒತ್ತಿಹೇಳಿದ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಸೋಮವಾರ ಸಂಪುಟದ ಸಹೋದ್ಯೋಗಿಗಳು ತಮ್ಮ ಭದ್ರತಾ ಸಿಬ್ಬಂದಿಯನ್ನು ಆದಷ್ಟು ಕನಿಷ್ಠ ಸಂಖ್ಯೆಯಲ್ಲಿಡಲು ಕೇಳಿಕೊಂಡರು.

ತಾವು ಈಗಾಗಲೇ ತಮ್ಮ ಭದ್ರತಾ ಸಿಬ್ಬಂದಿಯನ್ನು ಕಡಿಮೆಗೊಳಿಸಿಕೊಂಡಿರುವುದಾಗಿ ತಿಳಿಸಿದ ಅವರು, ಮುಖ್ಯಮಂತ್ರಿ ಕಚೇರಿಯಲ್ಲಿ ನಡೆದ ಮಂತ್ರಿ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ರೀತಿಯನ್ನು ಅಳವಡಿಸಿಕೊಳ್ಳುವುದರಿಂದ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನ್ಯಾಯಯುತವಾಗಿ ನಿಯೋಜಿಸಲು ಸಹಕಾರಿಯಾಗುವುದಲ್ಲದೆ, ಈ ನಿಟ್ಟಿನಲ್ಲಿ ಸಾಮಾನ್ಯ ಜನರನ್ನು ಅನಗತ್ಯ ಅನಾನುಕೂಲತೆಯಿಂದ ರಕ್ಷಿಸುತ್ತದೆ ಎಂದು ಹೇಳಿದರು.

ಸಂಪುಟ ಸಭೆಯಲ್ಲಿ, 'ರಾಜ್ಯದ ಜನಪರ ಯೋಜನೆಗಳು ಮತ್ತು ರಾಜ್ಯದ ಒಟ್ಟಾರೆ ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕಾಗಿ' ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಅವರ ಮಂತ್ರಿಮಂಡಲದ ಭಾಗವಾಗಿದ್ದವರಿಗೆ ಮುಖ್ಯಮಂತ್ರಿ ಚನ್ನಿ ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

'ಎಲ್ಲಾ ಆಡಳಿತ ಕಾರ್ಯದರ್ಶಿಗಳು ಮತ್ತು ಇಲಾಖಾ ಮುಖ್ಯಸ್ಥರಿಗೆ ತಮ್ಮ ಅಭಿವೃದ್ಧಿ ಯೋಜನೆಗಳು ಹಾಗೂ ಕಲ್ಯಾಣ ಯೋಜನೆಗಳನ್ನು ಕಾಲಮಿತಿಯಲ್ಲಿ ಮತ್ತು ಸಮಗ್ರವಾಗಿ ಅನುಷ್ಠಾನಗೊಳಿಸಲು ಕ್ರಿಯಾ ಯೋಜನೆ ರೂಪಿಸಬೇಕು'. ಜನರಿಗೆ ಸ್ವಚ್ಛ, ಪಾರದರ್ಶಕ, ನ್ಯಾಯಸಮ್ಮತ ಮತ್ತು ದಕ್ಷ ಆಡಳಿತದ ಭರವಸೆ ನೀಡಿದ ಚನ್ನಿ, ಮಂತ್ರಿಗಳನ್ನು ತಮ್ಮ ಸಾಮರ್ಥ್ಯವನ್ನು ಮೀರಿ ಅತ್ಯುತ್ತಮ ಪ್ರದರ್ಶನ ನೀಡುವಂತೆ ಕೇಳಿಕೊಂಡರು.

ಉತ್ತಮ ಆಡಳಿತವನ್ನು ನೀಡುವ ಮೂಲಕ ಜನರ ನಿರೀಕ್ಷೆಗಳನ್ನು ತಲುಪಲು ಈಗ ತಾವು ಸಮಯವನ್ನು ಮೀರಿ ಕೆಲಸ ಮಾಡಬೇಕಾಗುತ್ತದೆ. ಅತ್ಯಂತ ಬದ್ಧತೆ, ಪ್ರಾಮಾಣಿಕತೆ ಮತ್ತು ಸರ್ಕಾರದ ಪ್ರತಿಷ್ಠೆಯನ್ನು ಹೆಚ್ಚಿಸಲು ಮತ್ತು ವಿಶೇಷವಾಗಿ ತಳಮಟ್ಟದಲ್ಲಿನ ಜನರ ಆಕಾಂಕ್ಷೆಗಳನ್ನು ಪೂರೈಸಲು ಹುರುಪಿನಿಂದ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.