ಚಂಡೀಗಢ: ನಂಗಲ್ ಅಣೆಕಟ್ಟೆ ಭದ್ರತೆಗೆ ಸಿಐಎಸ್ಎಫ್ನ 296 ಸಿಬ್ಬಂದಿಯನ್ನು ನಿಯೋಜಿಸಿರುವ ಕೇಂದ್ರದ ಕ್ರಮವನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ ಖಂಡಿಸಿದ್ದಾರೆ.
ಸಂಗ್ರೂರ್ನಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮಾನ್, ರಾಜ್ಯದ ಪೊಲೀಸರು ಈಗಾಗಲೇ ಅಣೆಕಟ್ಟೆಗೆ ಭದ್ರತೆ ಒದಗಿಸುತ್ತಿರುವಾಗ, ಸಿಐಎಸ್ಎಫ್ ಸಿಬ್ಬಂದಿಯನ್ನು ನಿಯೋಜಿಸುವ ಅಗತ್ಯವೇನಿತ್ತು. ಭದ್ರತೆ ಒದಗಿಸುವ ಬಗ್ಗೆ ಪಂಜಾಬ್ ಪೊಲೀಸರ ಮೇಲೆ ನಂಬಿಕೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಶನಿವಾರ ನಡೆಯಲಿರುವ ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಅವರು ಹೇಳಿದ್ದಾರೆ.
ನಂಗಲ್ ಅಣೆಕಟ್ಟೆ ನೀರು ಹಂಚಿಕೆ ಬಗ್ಗೆ ಪಂಜಾಬ್ ಮತ್ತು ಹರಿಯಾಣ ನಡುವೆ ಉದ್ವಿಗ್ನತೆ ಉಂಟಾಗಿದೆ. ಈ ಮಧ್ಯೆ, ಭದ್ರತೆಗಾಗಿ ಕೇಂದ್ರ ಸರ್ಕಾರ ಸಿಐಎಸ್ಎಫ್ನ 296 ಸಿಬ್ಬಂದಿಯ ತುಕಡಿಯನ್ನು ನಿಯೋಜಿಸಿದೆ.
ಸಿಐಎಸ್ಎಫ್ ಸಿಬ್ಬಂದಿ ನಿಯೋಜನೆಗೆ ವರ್ಷಕ್ಕೆ ₹8.58 ಕೋಟಿ ವೆಚ್ಚವಾಗಲಿದೆ. ಈ ಹಣವನ್ನು ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿ (ಬಿಬಿಎಂಬಿ) ಅಥವಾ ಪಂಜಾಬ್ ಸರ್ಕಾರ ಪಾವತಿಸುತ್ತದೆ ಎಂದು ಕೇಂದ್ರ ಹೇಳಿದೆ. ಈಗಾಗಲೇ ಪಂಜಾಬ್ ಪೊಲೀಸರು ಅಣೆಕಟ್ಟೆಗೆ ಭದ್ರತೆ ಒದಗಿಸುತ್ತಿರುವಾಗ ಇದರ ಅಗತ್ಯ ಏನಿತ್ತು?. ನಾವು ಏಕೆ ಹಣವನ್ನು ನೀಡಬೇಕು? ಎಂದು ಮಾನ್ ಕೇಳಿದ್ದಾರೆ.
ಕೇಂದ್ರದ ಈ ಕ್ರಮವನ್ನು ನಾನು ವಿರೋಧಿಸುತ್ತೇನೆ. ಬಿಬಿಎಂಬಿ ಮೂಲಕವಾಗಲಿ ಅಥವಾ ಪಂಜಾಬ್ ಸರ್ಕಾರದ ಖಜಾನೆಯಿಂದ ಹಣವನ್ನು ನೀಡಲು ನಾವು ಒಪ್ಪುವುದಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.