ADVERTISEMENT

ಕೃಷಿ ಕಾಯ್ದೆ ವಿರೋಧಿಸಿ ಸಾವಿರಾರು ಟ್ರ್ಯಾಕ್ಟರ್ ಸಹಿತ ದೆಹಲಿಯತ್ತ ರೈತರು

ಏಜೆನ್ಸೀಸ್
Published 17 ಜನವರಿ 2021, 9:59 IST
Last Updated 17 ಜನವರಿ 2021, 9:59 IST
ಟ್ರ್ಯಾಕ್ಟರ್ ಸಮೇತ ದೆಹಲಿಯತ್ತ ತೆರಳುತ್ತಿರುವ ಸಾವಿರಾರು ರೈತರು
ಟ್ರ್ಯಾಕ್ಟರ್ ಸಮೇತ ದೆಹಲಿಯತ್ತ ತೆರಳುತ್ತಿರುವ ಸಾವಿರಾರು ರೈತರು   

ನವದೆಹಲಿ: ಜನವರಿ 26ರಂದು ದೆಹಲಿಯಲ್ಲಿ ಹಮ್ಮಿಕೊಂಡಿರುವ ರ‍್ಯಾಲಿಯಲ್ಲಿ ಭಾಗವಹಿಸಲು ಸಾವಿರಾರು ರೈತರು ಟ್ರ್ಯಾಕ್ಟರ್ ಸಮೇತ ಪಂಜಾಬ್‌ನ ಲುಧಿಯಾನದಿಂದ ರಾಷ್ಟ್ರ ರಾಜಧಾನಿಯತ್ತ ಪ್ರಯಾಣ ಬೆಳೆಸಿದ್ದಾರೆ.

'ಗಣರಾಜ್ಯೋತ್ಸವ ದಿನದಂದು ರಾಷ್ಟ್ರ ರಾಜಧಾನಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ಆಯೋಜಿಸಲಾಗಿದೆ. ರ‍್ಯಾಲಿಯಲ್ಲಿ ಸುಮಾರು 1 ಲಕ್ಷ ಟ್ರ್ಯಾಕ್ಟರ್‌ಗಳು ಇರಲಿವೆ' ಎಂದು ರೈತ ಮುಖಂಡರು ತಿಳಿಸಿದ್ದಾರೆ.

‘ಹರಿಯಾಣದ ಪ್ರತಿ ಮನೆಯಿಂದ ಒಬ್ಬರು, ಪ್ರತಿ ಹಳ್ಳಿಯಿಂದ 10 ಟ್ರ್ಯಾಕ್ಟರ್ ಹಾಗೂ ಪ್ರತಿ ಊರಿನಿಂದ 11 ಮಹಿಳೆಯರು ರ‍್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ’ ಎಂದು ಮುಖಂಡ ಜೋಗಿಂದರ್ ನೇನ್ ಹೇಳಿದ್ದಾರೆ.

ADVERTISEMENT

ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಟ್ರ್ಯಾಕ್ಟರ್‌ ಜಾಥಾ ಅಥವಾ ಇನ್ನಾವುದೇ ರೀತಿಯ ಪ್ರತಿಭಟನೆ ನಡೆಸದಂತೆ ಆದೇಶ ನೀಡಬೇಕು ಎಂದು ಕೋರಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ವಜಾಗೊಳಿಸುವಂತೆಯೂ ಲೋಕಶಕ್ತಿ ಸಂಘಟನೆಯು ಸುಪ್ರೀಂ ಕೋರ್ಟ್‌ ಅನ್ನು ಕೋರಿದೆ.

ಉದ್ದೇಶಿತ ಟ್ರ್ಯಾಕ್ಟರ್ ಮೆರವಣಿಗೆಯ ರ‍್ಯಾಲಿಯ ವಿರುದ್ಧ ಕೇಂದ್ರ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬಡೆ ನೇತೃತ್ವದ ನ್ಯಾಯಪೀಠವು ಸೋಮವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲು ಒಪ್ಪಿಕೊಂಡಿದೆ.

ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನಾನಿರತ ರೈತರು ಮತ್ತು ಕೇಂದ್ರ ಕೃಷಿ ಸಚಿವಾಲಯದ ನಡುವೆ ಶುಕ್ರವಾರ ನಡೆದ 9ನೇ ಸುತ್ತಿನ ಮಾತುಕತೆಯು ವಿಫಲವಾಗಿದೆ. ರೈತರು ಮತ್ತು ಸರ್ಕಾರವು ತಮ್ಮ ಪಟ್ಟುಗಳನ್ನು ಸಡಿಲಿಸದ ಕಾರಣ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಆದರೆ ಜನವರಿ 19ಕ್ಕೆ 10ನೇ ಸುತ್ತಿನ ಮಾತುಕತೆ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.