ADVERTISEMENT

ಕಾಂಗ್ರೆಸ್ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾದ ಸಿಧು ಸಲಹೆಗಾರರು; ಮಾಲ್ವಿಂದರ್ ಔಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಆಗಸ್ಟ್ 2021, 8:56 IST
Last Updated 27 ಆಗಸ್ಟ್ 2021, 8:56 IST
ಪಂಜಾಬ್‌ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು
ಪಂಜಾಬ್‌ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು   

ಚಂಡೀಗಡ: ಪಂಜಾಬ್‌ ಕಾಂಗ್ರೆಸ್‌ನ ಮುಖ್ಯಸ್ಥ ನವಜೋತ್‌ ಸಿಂಗ್‌ ಸಿಧು ಅವರ ಸಲಹೆಗಾರ ಮಾಲ್ವಿಂದರ್ ಸಿಂಗ್‌ ಮಾಲಿ ತಮ್ಮ ಸ್ಥಾನದಿಂದ ಹೊರ ಬಂದಿದ್ದಾರೆ. ವಿವಾದಗಳಿಗೆ ಕಾರಣರಾಗುತ್ತಿರುವ ಇಬ್ಬರು ಸಲಹೆಗಾರರನ್ನು ಸ್ಥಾನದಿಂದ ತೆಗೆದು ಹಾಕುವಂತೆ ಸಿಧು ಅವರಿಗೆ ಎಐಸಿಸಿ ಪಂಜಾಬ್‌ನ ಉಸ್ತುವಾರಿ ವಹಿಸಿರುವ ಹರೀಶ್‌ ರಾವತ್‌ ತಿಳಿಸಿದ್ದರು.

ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಮತ್ತು ಅವರ ಬೆಂಬಲಿಗರ ಮೇಲೆ ಸಿಧು ಅವರ ಸಲಹೆಗಾರರಾದ ಮಾಲ್ವಿಂದರ್ ಸಿಂಗ್‌ ಮಾಲಿ ಮತ್ತು ಪ್ಯಾರೆ ಲಾಲ್‌ ಗರ್ಗ್‌ ಟೀಕಾ ಪ್ರಹಾರ ಮುಂದುವರಿಸಿದ್ದರು. ವಿವಾದಗಳಿಗೆ ದಾರಿ ಮಾಡಿಕೊಡುತ್ತಿರುವ ಸಲಹೆಗಾರರ ಪೈಕಿ ಮಲ್ವಿಂದರ್‌ ಮತ್ತು ಪ್ಯಾರೆ ಲಾಲ್‌ ಅವರನ್ನು ಸ್ಥಾನದಿಂದ ಕೈಬಿಡುವಂತೆ ಕಾಂಗ್ರೆಸ್‌ ಹೈಕಮಾಂಡ್‌ ಶುಕ್ರವಾರ ಸಿಧು ಅವರಿಗೆ ಸೂಚಿಸಿತ್ತು.

ಕಾಶ್ಮೀರ ವಿಚಾರಗಳು ಮತ್ತು ಕ್ಯಾಪ್ಟನ್‌ ಅವರಿಂದರ್‌ ಸಿಂಗ್‌ ಅವರನ್ನು ವೈಯಕ್ತಿಕವಾಗಿ ನಿಂದಿಸುವ ಪೋಸ್ಟ್‌ಗಳನ್ನು ಮಾಲ್ವಿಂದರ್ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಪ್ರಕಟಿಸಿದ್ದರು. ಸಿಧು ಅವರ ಸಹವರ್ತಿಗಳ ಪೋಸ್ಟ್‌ಗಳಿಗೆ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರು 'ರಾಷ್ಟ್ರ ವಿರೋಧಿ ಹಾಗೂ ಅತ್ಯಂತ ಕೆಟ್ಟದಾದ ಹೇಳಿಕೆಗಳು' ಎಂದು ಪ್ರತಿಕ್ರಿಯಿಸಿದ್ದರು.

ADVERTISEMENT

ಸಿಧು ಸಲಹೆಗಾರರ ಪೋಸ್ಟ್‌ಗಳು ವಿರೋಧ ಪಕ್ಷಗಳಾದ ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿಗೆ ಟೀಕೆ ಮಾಡಲು ಉತ್ತಮ ಸರಕನ್ನೇ ಒದಗಿಸಿದ್ದವು. ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರ ರೇಖಾ ಚಿತ್ರವನ್ನು ಪ್ರಕಟಿಸುವ ಮೂಲಕ 1984ರ ಸಿಖ್‌ ವಿರೋಧಿ ಗಲಭೆಯನ್ನು ನೆನಪಿಸಿದ್ದರು. ಇವುಗಳು ಕಾಂಗ್ರೆಸ್‌ ಹೈಕಮಾಂಡ್‌ ಕಣ್ಣು ಕೆಂಪಾಗಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.