ADVERTISEMENT

Puri Stampede: ಮತ್ತೊಮ್ಮೆ ಕಾಲ್ತುಳಿತ, 3 ಸಾವು; ₹25 ಲಕ್ಷ ಪರಿಹಾರ ಘೋಷಣೆ

ಪಿಟಿಐ
Published 29 ಜೂನ್ 2025, 15:50 IST
Last Updated 29 ಜೂನ್ 2025, 15:50 IST
ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಸ್ಥರು ಆಸ್ಪತ್ರೆಯ ಮುಂಭಾಗ ಭಾನುವಾರ ರೋದಿಸಿದರು –ಪಿಟಿಐ ಚಿತ್ರ
ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಸ್ಥರು ಆಸ್ಪತ್ರೆಯ ಮುಂಭಾಗ ಭಾನುವಾರ ರೋದಿಸಿದರು –ಪಿಟಿಐ ಚಿತ್ರ   

ಪುರಿ: ಪುರಿ ಜಗನ್ನಾಥ ದೇವರ ರಥಯಾತ್ರೆಗೆ ಸಂಬಂಧಿಸಿ ಭಾನುವಾರ ಇಲ್ಲಿನ ಶ್ರೀ ಗುಂಡಿಚಾ ದೇವಾಲಯದ ಬಳಿ ಧಾರ್ಮಿಕ ಆಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಬೆಳಗಿನ ಜಾವ 4.20ಕ್ಕೆ ಕಾಲ್ತುಳಿತ ಸಂಭವಿಸಿದೆ. ಈ ಘಟನೆಯಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಗಂಡಸು ಮೃತಪಟ್ಟಿದ್ದು, 50 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ.

ರಥಯಾತ್ರೆಯು ಶುಕ್ರವಾರ ಆರಂಭಗೊಂಡಿತ್ತು. ಆ ದಿನ ಕೂಡ ಕಾಲ್ತುಳಿತ ಸಂಭವಿಸಿ, ಸುಮಾರು 500 ಮಂದಿ ಗಾಯಗೊಂಡಿದ್ದರು.

ಪುರಿ ಜಗನ್ನಾಥ, ದೇವಿ ಸುಭದ್ರ ಹಾಗೂ ಬಾಲಚಂದ್ರ ದೇವರ ಮೂರ್ತಿಗಳಿದ್ದ ರಥವು ಗುಂಡಿಚಾ ದೇವಾಲಯದ ಬಳಿ ನಿಲುಗಡೆಗೊಂಡಿತ್ತು. ದೇವರ ಮೂರ್ತಿಗೆ ಅಡ್ಡಲಾಗಿ ಹಾಕಲಾಗಿದ್ದ ಪರದೆಯನ್ನು ಸರಿಸುವಾಗ ಕಾಲ್ತುಳಿತ ಸಂಭವಿಸಿದೆ. ಪರದೆ ತೆರೆಯುತ್ತಿದ್ದಂತೆಯೇ ದೇವರ ಮೂರ್ತಿಗಳನ್ನು ಕಾಣಲು ಭಕ್ತರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ADVERTISEMENT

‘ಧಾರ್ಮಿಕ ಆಚರಣೆಯೊಂದಕ್ಕೆ ಸಂಬಂಧಿಸಿದ ವಸ್ತುಗಳನ್ನು ಎರಡು ಟ್ರಕ್‌ಗಳು ಹೊತ್ತು ತರುತ್ತಿದ್ದವು. ಟ್ರಕ್‌ಗಳು ರಥದ ಸಮೀಪಕ್ಕೆ ಬರಬೇಕಿತ್ತು. ರಥದ ಸಮೀಪವೇ ಸಾವಿರಾರು ಭಕ್ತರು ಸೇರಿದ್ದರು. ಟ್ರಕ್‌ ಕಾರಣಕ್ಕಾಗಿಯೇ ಸ್ಥಳದಲ್ಲಿ ಗಲಿಬಿಲಿ ಉಂಟಾಯಿತು’ ಎಂದು ಪೊಲೀಸರು ಮಾಹಿತಿ ನೀಡಿದರು.

ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಸ್ಥರು ಆಸ್ಪತ್ರೆಯ ಮುಂಭಾಗ ಭಾನುವಾರ ರೋಧಿಸಿದರು

ರಥದಲ್ಲಿದ್ದ ದೇವರ ಮೂರ್ತಿಯನ್ನು ನೋಡಲು ಹಲವರು ಅವಸರ ಮಾಡಿದರು. ಸ್ಥಳದಲ್ಲಿ ಪೊಲೀಸರು ಇರಲಿಲ್ಲ. ಕಾಲ್ತುಳಿತದ ಸ್ಥಳದಿಂದ ಒಂದು ಕೀ.ಮೀ ದೂರದಲ್ಲಿ ಆಂಬುಲೆನ್ಸ್‌ ಇತ್ತು
ಮೃತಪಟ್ಟ ಮಹಿಳೆಯೊಬ್ಬರ ಪತಿ
ಸರ್ಕಾರದ ಹಾಗೂ ನನ್ನ ಪರವಾಗಿ ಪುರಿ ಜಗನ್ನಾಥನ ಭಕ್ತರಲ್ಲಿ ಕ್ಷಮೆ ಕೇಳುತ್ತೇನೆ. ದೇವರ ಮೂರ್ತಿಯನ್ನು ನೋಡಲು ಭಕ್ತರಲ್ಲಿದ್ದ ಅತ್ಯುತ್ಸಾಹದಿಂದಲೇ ಘಟನೆ ಸಂಭವಿಸಿದೆ
ಮೋಹನ್‌ ಚರಣ್‌ ಮಾಝಿ ಒಡಿಶಾ ಮುಖ್ಯಮಂತ್ರಿ
ರಥಯಾತ್ರೆಗೆ ಸಂಬಂಧಿಸಿ ರಾಜ್ಯ ಸರ್ಕಾರವು ವ್ಯವಸ್ಥೆಯನ್ನು ಇನ್ನಷ್ಟು ಅಚ್ಚುಕಟ್ಟಾಗಿ ನಿರ್ವಹಿಸಬಹುದಿತ್ತು
ಧರ್ಮೇಂದ್ರ ಪ್ರಧಾನ್‌ ಕೇಂದ್ರ ಶಿಕ್ಷಣ ಸಚಿವ
ಕಾಲ್ತುಳಿತದಲ್ಲಿ ನೂರಾರು ಮಂದಿ ಗಾಯಗೊಂಡು ಒಂದು ದಿನ ಬಳಿಕವೇ ಮತ್ತೊಮ್ಮೆ ಕಾಲ್ತುಳಿತ ಸಂಭವಿಸಿದೆ. ಶಾಂತಿಯುತವಾಗಿ ಆಚರಣೆಯನ್ನು ನಡೆಸಲು ಸಾಧ್ಯವಾಗದೇ ಇರುವುದು ಸರ್ಕಾರದ ವೈಫಲ್ಯ
ನವೀನ್‌ ಪಟ್ನಾಯಕ್‌ ಒಡಿಶಾ ವಿಧಾನಸಭೆ ವಿರೋಧ ಪಕ್ಷದ ನಾಯಕ
ಇಂಥ ದೊಡ್ಡ ಕಾರ್ಯಕ್ರಮಗಳಿಗೆ ಭಾರಿ ಸಂಖ್ಯೆಯಲ್ಲಿ ಬರುವ ಜನರ ನಿರ್ವಹಣೆ ಮತ್ತು ಭದ್ರತೆ ಹೇಗಿರಬೇಕು ಎಂಬುದನ್ನು ಪರಿಶೀಲನೆಗೆ ಒಳಪಡಿಸಬೇಕಾಗಿದೆ ಎಂದು ಈ ಕಾಲ್ತುಳಿತ ನೆನಪಿಸಿದೆ
ರಾಹುಲ್‌ ಗಾಂಧಿ ಲೋಕಸಭೆ ವಿರೋಧ ಪಕ್ಷದ ನಾಯಕ

ರಾಜ್ಯ ಸರ್ಕಾರದ ಕ್ರಮಗಳು

* ಪುರಿ ಜಿಲ್ಲೆಯ ಜಿಲ್ಲಾಧಿಕಾರಿ ಸಿದ್ಧಾರ್ಥ್‌ ಶಂಕರ್‌ ಸ್ವೈನ್‌ ಹಾಗೂ ಎಸ್‌ಪಿ ವಿನೀತ್‌ ಅರ್ಗವಾಲ್‌ ವರ್ಗಾವಣೆ. ಇಬ್ಬರು ಪೊಲೀಸ್‌ ಅಧಿಕಾರಿಗಳ ಅಮಾನತು

* ಕಾಲ್ತುಳಿತ ಕುರಿತು ತನಿಖೆಗೆ ಆದೇಶ

* ಮೃತರ ಕುಟುಂಬಗಳಿಗೆ ತಲಾ ₹25 ಲಕ್ಷ ಪರಿಹಾರ ಘೋಷಣೆ

* ರಥಯಾತ್ರೆ ಸಂಬಂಧ ಇನ್ನೂ ಹಲವು ಆಚರಣೆಗಳು ನಡೆಯಬೇಕಿರುವುದರಿಂದ ಕೆಲವು ಹಿರಿಯ ಐಪಿಎಸ್‌ ಹಾಗೂ ಐಎಎಸ್‌ ಅಧಿಕಾರಿಗಳಿಗೆ ಹೆಚ್ಚುವರಿ ಜವಾಬ್ದಾರಿ

ಭಕ್ತೆಯ ಮನೆಗೆ ಹೋಗುವ ಜಗನ್ನಾಥ ಗುಂಡಿಚಾ ದೇವಸ್ಥಾನವು ಪುರಿ ಜಗನ್ನಾಥ ದೇವಸ್ಥಾನದಿಂದ ಮೂರು ಕೀ.ಮೀ ದೂರದಲ್ಲಿದೆ. ಗುಂಡಿಚಾ ದೇವಿಯು ಜಗನ್ನಾಥನ ಭಕ್ತೆ ಎಂದು ಹೇಳಲಾಗುತ್ತದೆ. ಈಕೆಯ ಭಕ್ತಿಗೆ ಮೆಚ್ಚಿ ಜಗನ್ನಾಥನು ‘ಪ್ರತಿ ವರ್ಷ ರಥಯಾತ್ರೆಯ ವೇಳೆ ನಿಮ್ಮ ಮನೆಗೆ ಬರುತ್ತೇನೆ’ ಎಂದು ಹೇಳಿದ್ದನು ಎಂಬುದಾಗಿ ಪುರಾಣಗಳಲ್ಲಿ ಹೇಳಲಾಗಿದೆ. ಇದರಂತೆ ರಥಯಾತ್ರೆ ಆರಂಭವಾದ ಬಳಿಕ ರಥವು ಗುಂಡಿಚಾ ದೇವಾಲಯಕ್ಕೆ ಬರುತ್ತದೆ. ಏಳು ದಿನಗಳವರೆಗೆ ಇಲ್ಲೇ ಇರುತ್ತದೆ. ಬಳಿಕ ಜಗನ್ನಾಥ ದೇವಸ್ಥಾನಕ್ಕೆ ರಥವು ವಾಪಸಾಗುತ್ತದೆ. ಈ ಬಾರಿ ಜುಲೈ 5ಕ್ಕೆ ರಥವು ಮರಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.