ನವದೆಹಲಿ: ರಫೇಲ್ ಒಪ್ಪಂದದ ಮೂಲಕಉದ್ಯಮಿ ಅನಿಲ್ ಅಂಬಾನಿ ಜೇಬಿಗೆ ₹30 ಸಾವಿರ ಕೋಟಿ ತುಂಬಿಸಲು ಪ್ರಧಾನಿ ನರೇಂದ್ರ ಮೋದಿ ನೆರವಾಗಿದ್ದಾರೆ. ಅವರೊಬ್ಬ ಭ್ರಷ್ಟ. ಅವರ ವಿರುದ್ಧ ತನಿಖೆಯಾಗಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದರು.
‘ರಫೇಲ್ ಯುದ್ಧ ವಿಮಾನ ಖರೀದಿ ಮಾತುಕತೆ ವೇಳೆ ರಿಲಯನ್ಸ್ ಡಿಫೆನ್ಸ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆಗೆ ನಮ್ಮನ್ನು ದೂಡಲಾಗಿತ್ತು’ ಎಂಬ‘ಡಸಾಲ್ಟ್ ಏವಿಯೇಶನ್’ನ ಉಪಾಧ್ಯಕ್ಷರ ಹೇಳಿಕೆ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ಹರಿಹಾಯ್ದರು.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತರಾತುರಿಯಲ್ಲಿ ಫ್ರಾನ್ಸ್ಗೆ ತೆರಳುವ ಅಗತ್ಯವೇನಿತ್ತು ಎಂದೂ ರಾಹುಲ್ ಪ್ರಶ್ನಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಮೂರು ದಿನಗಳ ಭೇಟಿಗಾಗಿ ಬುಧವಾರ ರಾತ್ರಿ ಫ್ರಾನ್ಸ್ಗೆ ತೆರಳಿದ್ದಾರೆ. ಅಲ್ಲಿನ ರಕ್ಷಣಾ ಸಚಿವರ ಜತೆ ದ್ವಿಪಕ್ಷೀಯ ಮಾತುಕತೆಗಾಗಿ ಅವರು ತೆರಳಿದ್ದಾರೆ ಎನ್ನಲಾಗಿದೆ. ಫ್ರಾನ್ಸ್ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರನ್ನೂ ಭೇಟಿ ಮಾಡುವ ಸಾಧ್ಯತೆ ಇದೆ. ಈ ಮಧ್ಯೆ, ನಿರ್ಮಲಾ ಅವರು‘ಡಸಾಲ್ಟ್ ಏವಿಯೇಶನ್’ನ ರಫೇಲ್ ಯುದ್ಧವಿಮಾನ ಉತ್ಪಾದನಾ ಘಟಕಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.