ADVERTISEMENT

Telangana Election: ಅರಿಸಿನ ಕ್ವಿಂಟಲ್‌ಗೆ ₹15 ಸಾವಿರ ಬೆಂಬಲ ಬೆಲೆ: ರಾಹುಲ್

ಪಿಟಿಐ
Published 20 ಅಕ್ಟೋಬರ್ 2023, 14:39 IST
Last Updated 20 ಅಕ್ಟೋಬರ್ 2023, 14:39 IST
<div class="paragraphs"><p>ತೆಲಂಗಾಣದ ಜಗ್ತಿಅಲ್‌ ಜಿಲ್ಲೆಯಲ್ಲಿ ರಸ್ತೆಬದಿಯ ಆಹಾರ ಮಳಿಗೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ದೋಸೆ ಹುಯ್ದರು. ಪಿಟಿಐ ಚಿತ್ರ&nbsp; </p></div>

ತೆಲಂಗಾಣದ ಜಗ್ತಿಅಲ್‌ ಜಿಲ್ಲೆಯಲ್ಲಿ ರಸ್ತೆಬದಿಯ ಆಹಾರ ಮಳಿಗೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ದೋಸೆ ಹುಯ್ದರು. ಪಿಟಿಐ ಚಿತ್ರ 

   

ಜಗ್ತಿಅಲ್ (ತೆಲಂಗಾಣ): ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅರಿಸಿನಕ್ಕೆ ಕ್ವಿಂಟಲ್‌ಗೆ ₹12,000 ರಿಂದ ₹15,000 ಬೆಂಬಲ ಬೆಲೆ ಸಿಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.

ಪಕ್ಷದ ‘ವಿಜಯಭೇರಿ’ ಯಾತ್ರೆ ಅಂಗವಾಗಿ ಶುಕ್ರವಾರ ನಡೆದ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು,  ರೈತರು ಬೆಳೆಯುವ ಪ್ರತಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಗಿಂತ ₹500 ಗಳಷ್ಟು ಹೆಚ್ಚು ಪಡೆಯುವುದನ್ನು ಪಕ್ಷವು ಖಾತ್ರಿಪಡಿಸುತ್ತದೆ. ಇಲ್ಲಿನ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಯುಪಿಎ ಸರ್ಕಾರ ನಡೆಸಿದ ಜಾತಿ ಜನಗಣತಿ ಅಂಕಿಅಂಶಗಳನ್ನು ಪ್ರಧಾನಿ ನರೇಂದ್ರ ಮೋದಿ ಬಹಿರಂಗಪಡಿಸಿಲ್ಲ ಎಂದು  ಆರೋಪಿಸಿದ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಿಂದಿನ ಅಂಕಿಅಂಶಗಳನ್ನು ಬಿಡುಗಡೆ ಮಾಡುವುದರೆ ಜತೆ ಹೊಸದಾಗಿ ಜಾತಿ ಗಣತಿ  ಸಹ ನಡೆಸಲಾಗುವುದು ಎಂದರು. 

ಬಿಆರ್‌ಎಸ್‌, ಬಿಜೆಪಿ ಮತ್ತು ಎಐಎಂಐಎಂ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ಅವರೆಲ್ಲರೂ ಕಾಂಗ್ರೆಸ್‌ ಸೋಲಿಸಲು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ನೇತೃತ್ವದ ಬಿಆರ್‌ಎಸ್ ಸಂಸತ್ತಿನಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತದೆ ಎಂದು ಹೇಳಿದರು.

ತೆಲಂಗಾಣದ ಜತೆ ತಮ್ಮ ಸಂಬಂಧವು ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಕಾಲದಿಂದಲೂ ಇದೆ ಎಂದರು. 

ರೋಡ್‌ ಶೋ ವೇಳೆ ರಸ್ತೆಬದಿಯ ಆಹಾರ ಮಳಿಗೆಯಲ್ಲಿ ರಾಹುಲ್ ಗಾಂಧಿ ದೋಸೆ ಮಾಡಲು ಯತ್ನಿಸಿದರು. ಮಕ್ಕಳಿಗೆ  ಚಾಕೊಲೇಟ್‌ಗಳನ್ನು ಸಹ ನೀಡಿದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ತೆಲಂಗಾಣದ ಜಗ್ತಿಅಲ್ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಬಲಿಗರತ್ತ ಕೈ ಬೀಸಿದರು. ಪಿಟಿಐ ಚಿತ್ರ 

ಮೋದಿಗೆ ಜನ ಕಲ್ಯಾಣ ಮುಖ್ಯವಲ್ಲ : ಪ್ರಿಯಾಂಕಾ 

ಜೈಪುರ (ಪಿಟಿಐ): ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮೋದಿ ಸರ್ಕಾರದ ಗಮನ ಅಧಿಕಾರದಲ್ಲಿ ಉಳಿಯುವುದರ ಮೇಲಿದೆಯೇ ಹೊರತು ಜನ ಕಲ್ಯಾಣದ ಮೇಲಿಲ್ಲ ಎಂದು ಹೇಳಿದ್ದಾರೆ.

ರಾಜಸ್ಥಾನದ ದೌಸಾ ಜಿಲ್ಲೆಯ ಸಿಕ್ರಾಯ್‌ ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ತನ್ನ ‘ಉದ್ಯಮಿ ಸ್ನೇಹಿತರಿಗಾಗಿ’ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

‘ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜಸ್ಥಾನದಲ್ಲಿ ಎಷ್ಟು ಯೋಜನೆಗಳನ್ನು ಪ್ರಾರಂಭಿಸಲಾಗಿದೆ? ಮೋದಿ ಮತ್ತು ಬಿಜೆಪಿಯ ಗಮನ ಜನ ಕಲ್ಯಾಣದ ಮೇಲಿಲ್ಲ. ಅಧಿಕಾರದಲ್ಲಿ ಉಳಿಯುವುದು ಮತ್ತು ತಮ್ಮನ್ನು ತಾವು ಬಲಪಡಿಸಿಕೊಳ್ಳುವುದೇ ಅವರಿಗೆ ಮುಖ್ಯವಾಗಿದೆ’ ಎಂದು ಟೀಕಿಸಿದರು. 

ನಿಜವಾದ ನಾಯಕ ವರ್ತಮಾನ ಮತ್ತು ಭವಿಷ್ಯ ನೋಡುತ್ತಾನೆ ಮತ್ತು ಭೂತಕಾಲದ ಬಗ್ಗೆ ಮತ್ತೆ ಮಾತನಾಡುವುದಿಲ್ಲ ಎಂದು ಮೋದಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ ನಡೆಸಿದರು.

ಅಭಿವೃದ್ಧಿ ಬಗ್ಗೆ ಮಾತನಾಡುವ ಬದಲು ಬಿಜೆಪಿ ಧರ್ಮ ಮತ್ತು ಜಾತಿ ಸಮಸ್ಯೆಗಳನ್ನು ಏಕೆ ಎತ್ತುತ್ತದೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.