ADVERTISEMENT

ವಲಸೆ ಕಾರ್ಮಿಕರನ್ನು ಭೇಟಿಯಾಗಲು ರಸ್ತೆಗಿಳಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ

​ಪ್ರಜಾವಾಣಿ ವಾರ್ತೆ
Published 16 ಮೇ 2020, 14:52 IST
Last Updated 16 ಮೇ 2020, 14:52 IST
ದೆಹಲಿ ರಸ್ತೆಗಳಲ್ಲಿ ಕುಳಿತಿದ್ದ ಕಾರ್ಮಿಕರನ್ನು ಭೇಟಿ ಮಾಡಿ ಮಾತನಾಡಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ದೆಹಲಿ ರಸ್ತೆಗಳಲ್ಲಿ ಕುಳಿತಿದ್ದ ಕಾರ್ಮಿಕರನ್ನು ಭೇಟಿ ಮಾಡಿ ಮಾತನಾಡಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ   

ನವದೆಹಲಿ: ನಗರದ ಆಗ್ನೇಯ ಭಾಗದಲ್ಲಿರುವ ಸುಖದೇವ್ ವಿಹಾರ್ ಫ್ಲೈಓವರ್ ಬಳಿ ಬೀಡುಬಿಟ್ಟಿರುವ ವಲಸೆ ಕಾರ್ಮಿಕರನ್ನು ಭೇಟಿಯಾಗಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ಮಧ್ಯಾಹ್ನ ದೆಹಲಿಯ ಬೀದಿಗಿಳಿದಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗಿರುವ ಫೋಟೊಗಳಲ್ಲಿ, ಮಾಸ್ಕ್ ಧರಿಸಿರುವ ರಾಹುಲ್ ಗಾಂಧಿ, ಪಾದಚಾರಿ ಮಾರ್ಗದಲ್ಲಿ ಕುಳಿತು, ಕನಿಷ್ಠ ಮೂವರು ಪುರುಷರೊಂದಿಗೆ ಮಾತನಾಡುತ್ತಿದ್ದರೆ, ಮಹಿಳೆಯರು ಮತ್ತು ಚಿಕ್ಕ ಮಕ್ಕಳು ಸೇರಿದಂತೆ ಇತರರು ಹತ್ತಿರದಲ್ಲಿಯೇ ಕುಳಿತುಕೊಂಡಿದ್ದಾರೆ.

ಮೂಲಗಳ ಪ್ರಕಾರ, ದೇಶದಾದ್ಯಂತ ಕೊರೊನಾವೈರಸ್ ಹರಡುವುದನ್ನು ತಡೆಯಲು ಹೇರಿರುವ ಲಾಕ್‌ಡೌನ್ ಮಧ್ಯೆ ಸ್ವಗ್ರಾಮ ಮತ್ತು ಇತರ ರಾಜ್ಯಗಳ ಗ್ರಾಮಗಳಿಗೆ ಮರಳಲು ಪ್ರಯತ್ನಿಸುತ್ತಿರುವಾಗ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಿದರು.

ADVERTISEMENT

ಲಾಕ್‌ಡೌನ್‌ನಿಂದಾಗಿ ಇತರೆಡೆಗಳಲ್ಲಿ ಸಿಲುಕಿರುವವರು ತಮ್ಮ ಊರುಗಳನ್ನು ಸೇರಿಕೊಳ್ಳಲೆಂದೇ ಕೇಂದ್ರ ಸರ್ಕಾರವು ವಿಶೇಷ ರೈಲುಗಳ ವ್ಯವಸ್ಥೆ ಮಾಡಿದ್ದರೂ ಸಹ ಸಾವಿರಾರು ಜನರು ಮನೆಗೆ ತೆರಳಲು ನೂರಾರು ಕಿಲೋಮೀಟರ್ ಏಕೆ ನಡೆಯುತ್ತಿದ್ದಾರೆಂದು ಅರ್ಥಮಾಡಿಕೊಳ್ಳಲು ರಾಹುಲ್ ಪ್ರಯತ್ನಿಸುತ್ತಿದ್ದರು.

ರಾಹುಲ್ ಗಾಂಧಿ ವಲಸಿಗರೊಂದಿಗೆ ಮಾತುಕತೆ ನಡೆಸಿದ ನಂತರ, ಮೇಲಿನವರ ಆದೇಶದ ಮೇರೆಗೆ ಕಾರ್ಮಿಕರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ವರದಿಗಳು ಹೊರಬಿದ್ದವು. ಆದರೆ, ಇದು ಸುಳ್ಳು ಎಂದು ಪೊಲೀಸ್ ಮೂಲಗಳು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.