ನವದೆಹಲಿ: ಲಕ್ಷದ್ವೀಪದಲ್ಲಿ ಜಾರಿಗೊಳಿಸಿರುವ ಹೊಸ ನೀತಿಗಳನ್ನು ವಾಪಸ್ ಪಡೆಯುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಅವರು ಕೋರಿದ್ದಾರೆ.
ಈ ಬಗ್ಗೆ ಪ್ರಧಾನಿ ಅವರಿಗೆ ಪತ್ರ ಬರೆದಿರುವ ರಾಹುಲ್ ಗಾಂಧಿ, ‘ಅಭಿವೃದ್ಧಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಹೆಸರಿನಲ್ಲಿ ಹೊಸ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಹೊಸ ನೀತಿಗಳನ್ನು ಜಾರಿಗೊಳಿಸಿದ್ದಾರೆ. ಆದರೆ, ಈ ನೀತಿಗಳು ಜನವಿರೋಧಿಯಾಗಿವೆ. ಇದರಿಂದ, ಲಕ್ಷದ್ವೀಪದ ಜನರ ಭವಿಷ್ಯಕ್ಕೆ ಮಾರಕವಾಗಿದೆ. ಸಾರ್ವಜನಿಕರು ಅಥವಾ ಚುನಾಯಿತ ಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸದೆಯೇ ಆಡಳಿತಾಧಿಕಾರಿ ಏಕಪಕ್ಷೀಯವಾಗಿ ಬದಲಾವಣೆಗಳನ್ನು ಮಾಡಿದ್ದಾರೆ. ಈ ಕ್ರಮಗಳನ್ನು ಲಕ್ಷದ್ವೀಪದ ಜನತೆ ವಿರೋಧಿಸಿದ್ದಾರೆ’ ಎಂದು ವಿವರಿಸಿದ್ದಾರೆ.
‘ತಮ್ಮ ಆಶೋತ್ತರಗಳಿಗೆ ಸ್ಪಂದಿಸುವ ಮತ್ತು ಬದುಕಿಗೆ ಮಾರ್ಗ ತೋರುವ ಅಭಿವೃದ್ಧಿಯನ್ನು ಲಕ್ಷದ್ವೀಪದ ಜನತೆ ಬಯಸಿದ್ದಾರೆ’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
‘ದ್ವೀಪದ ಪರಿಸರ ಪಾವಿತ್ರ್ಯತೆಗೂ ಧಕ್ಕೆ ತರುವ ಪ್ರಯತ್ನವನ್ನು ಹೊಸ ನೀತಿಗಳಲ್ಲಿ ಮಾಡಲಾಗಿದೆ. ಕೆಲವು ಚಟುವಟಿಕೆಗಳಿಗೆ ಭೂಮಿಯ ಹಕ್ಕಿನ ವಿಷಯದಲ್ಲಿ ಮತ್ತು ಪರಿಸರ ನಿಯಮಗಳನ್ನು ಸಡಿಲಗೊಳಿಸಲಾಗಿದೆ’ ಎಂದು ರಾಹುಲ್ ದೂರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.