
ಅಮಿತ್ ಶಾ ಹಾಗೂ ರಾಹುಲ್ ಗಾಂಧಿ
–ಪಿಟಿಐ ಚಿತ್ರಗಳು
ಪುರ್ನಿಯಾ(ಬಿಹಾರ): ‘ಚುನಾವಣೆಯಲ್ಲಿ 160 ಸ್ಥಾನಗಳನ್ನು ಗೆಲ್ಲುವ ಮೂಲಕ ಎನ್ಡಿಎ ಮೈತ್ರಿಕೂಟವು ಸರ್ಕಾರ ರಚಿಸಲಿದ್ದು, ಬಿಹಾರದಲ್ಲಿ ರಾಹುಲ್ ಗಾಂಧಿ ಅವರ ‘ಅಂಗಡಿ’ ಮುಚ್ಚಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.
ಇಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ, ರಾಹುಲ್ ಗಾಂಧಿ ಮತ್ತು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್, ಬಿಹಾರದ ಸೀಮಾಂಚಲ ಪ್ರದೇಶವನ್ನು ನುಸುಳುಕೋರರ ತಾಣವನ್ನಾಗಿ ಪರಿವರ್ತಿಸಲು ಪಣ ತೊಟ್ಟಿದ್ದಾರೆ. ಆದರೆ, ನಾವು ಪ್ರತಿಯೊಬ್ಬ ನುಸುಳುಕೋರರನ್ನು ಪತ್ತೆಹಚ್ಚಿ, ಮತದಾರರ ಪಟ್ಟಿಯಿಂದ ಆವರ ಹೆಸರುಗಳನ್ನು ಅಳಿಸಿ ಹಾಕಿ ದೇಶದಿಂದ ಗಡೀಪಾರು ಮಾಡುತ್ತೇವೆ’ ಎಂದಿದ್ದಾರೆ.
‘ಬಿಹಾರದ ಮುಂದಿನ ಮುಖ್ಯಮಂತ್ರಿಯನ್ನು ನುಸುಳುಕೋರರು ನಿರ್ಧರಿಸಬಾರದು ಎಂದು ನೀವು ಬಯಸಿದರೆ, ಅವರನ್ನು ರಕ್ಷಿಸಲು ಯಾತ್ರೆ ಕೈಗೊಂಡ ಆರ್ಜೆಡಿ–ಕಾಂಗ್ರೆಸ್ ಒಕ್ಕೂಟವನ್ನು ಸೋಲಿಸಿ’ ಎಂದು ಶಾ ಹೇಳಿದ್ದಾರೆ. ಎರಡು ತಿಂಗಳ ಹಿಂದೆ ಆರ್ಜೆಡಿ–ಕಾಂಗ್ರೆಸ್ ಜಂಟಿಯಾಗಿ ರಾಜ್ಯಾದಾದ್ಯಂತ ‘ಮತದಾರರ ಅಧಿಕಾರ ಯಾತ್ರೆ’ ಕೈಗೊಂಡಿದ್ದವು.
‘ಚುನಾವಣೆಯಲ್ಲಿ ಇಂಡಿಯಾ ಬಣಕ್ಕೆ ಸೋಲು ಖಚಿತವಾಗಿದ್ದು, ಬಿಹಾರದಲ್ಲಿ ರಾಹುಲ್ ಗಾಂಧಿ ಅವರು ಅಂಗಡಿ ಮುಚ್ಚಲಿದೆ. 243 ಸದಸ್ಯ ಬಲದ ವಿಧಾನಸಭೆ ಚುನಾವಣೆಯಲ್ಲಿ 160 ಸ್ಥಾನಗಳನ್ನು ಗಳಿಸುವ ಮೂಲಕ ಎನ್ಡಿಎ ಸರ್ಕಾರ ರಚಿಸುತ್ತದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ
‘ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ತಮ್ಮ ಪುತ್ರರ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಆದರೆ, ಬಿಹಾರದಲ್ಲಿ ಮುಖ್ಯಮಂತ್ರಿ, ದೇಶದಲ್ಲಿ ಪ್ರಧಾನಮಂತ್ರಿ ಹುದ್ದೆ ಖಾಲಿ ಇಲ್ಲ’ ಎಂದು ಲೇವಡಿಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.