ADVERTISEMENT

ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿ, ರೈತರ ಹೋರಾಟ ಬೆಂಬಲಿಸಿ: ರಾಹುಲ್‌

ಟ್ವಿಟರ್‌ನಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮನವಿ

ಪಿಟಿಐ
Published 15 ಜನವರಿ 2021, 7:00 IST
Last Updated 15 ಜನವರಿ 2021, 7:00 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ‘ಸತ್ಯಾಗ್ರಹ‘ವನ್ನು ಬೆಂಬಲಿಸುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.

ರೈತರ ಪ್ರತಿಭಟನೆಗೆ ಬೆಂಬಲ ನೀಡುವ ಜತೆಗೆ ದೇಶದಲ್ಲಿ ಏರುತ್ತಿರುವ ತೈಲ ಬೆಲೆ ವಿರುದ್ಧವೂ ಹೋರಾಟ ನಡೆಸುವಂತೆ ರಾಹುಲ್ ಸಾರ್ವಜನಿಕರನ್ನು ಕೇಳಿದ್ದಾರೆ.

ತಮ್ಮ ಪಕ್ಷ ಆರಂಭಿಸಿರುವ ‘ಸ್ಪೀಕ್‌ಅಪ್‌ ಫಾರ್‌ ಕಿಸಾನ್ ಅಧಿಕಾರ್‌‘(#SpeakUpForKisanAdhikar) ಅಭಿಯಾನದಲ್ಲಿ ಭಾಗವಹಿಸಿರುವ ರಾಹುಲ್‌ ಗಾಂಧಿ, ‘ದೇಶದ ರೈತರು ತಮ್ಮ ಹಕ್ಕುಗಳನ್ನು ಗೆಲ್ಲುವುದಕ್ಕಾಗಿ ಸೊಕ್ಕಿನ ಮೋದಿ ಸರ್ಕಾರದ ವಿರುದ್ಧ ಸತ್ಯಾಗ್ರಹ ನಡೆಸುತ್ತಿದ್ದಾರೆ‘ ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ವಿರುದ್ಧ ಇಡೀ ದೇಶ ಇಂದು ಧ್ವನಿ ಎತ್ತುತ್ತಿದೆ‘ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಕೃಷಿ ಕಾಯ್ದೆಗಳ ರದ್ಧತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳ ಪ್ರತಿನಿಧಿಗಳು ಮತ್ತು ಸರ್ಕಾರದೊಂದಿಗೆ ನಡೆದ 9ನೇ ಸುತ್ತಿನ ಮಾತುಕತೆ ನಂತರ ಕಾಂಗ್ರೆಸ್ ಪಕ್ಷ ‘ಸ್ಪೀಕ್‌ಅಪ್‌ಫಾರ್‌ಕಿಸಾನ್‌ಅಧಿಕಾರ್‌‘ ಅಭಿಯಾನವನ್ನು ಆರಂಭಿಸಿದೆ.

ರೈತರು ನಡೆಸಲಿರುವ ಬೃಹತ್ ಪ್ರತಿಭಟನಾ ದಿನವನ್ನು ಕಾಂಗ್ರೆಸ್‌, ‘ಕಿಸಾನ್ ಅಧಿಕಾರಿ ದಿವಾಸ್‘ ಎಂದು ಗುರುತಿಸಿದೆ. ಅಂದು ಎಲ್ಲಾ ರಾಜ್ಯಗಳ ರಾಜಧಾನಿಯಲ್ಲಿ ರೈತರು ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.