ADVERTISEMENT

ರಾಹುಲ್ ಗಾಂಧಿಯವರನ್ನು ಮತ್ತೆ ಶಾಲೆಗೆ ಕಳುಹಿಸಬೇಕು: ಸಚಿವ ಗಿರಿರಾಜ್ ಸಿಂಗ್

ಪಿಟಿಐ
Published 9 ಮಾರ್ಚ್ 2021, 12:13 IST
Last Updated 9 ಮಾರ್ಚ್ 2021, 12:13 IST
ಕೇಂದ್ರ ಸಚಿವ ಗಿರಿರಾಜ್ ಸಿಂಗ್
ಕೇಂದ್ರ ಸಚಿವ ಗಿರಿರಾಜ್ ಸಿಂಗ್   

ನವದೆಹಲಿ: ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ ರಚಿಸುವ ಕುರಿತು ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಮಂಗಳವಾರ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಕಾಂಗ್ರೆಸ್ ನಾಯಕನನ್ನು 'ಶಾಲೆಗೆ ಕಳುಹಿಸಬೇಕು'. ಇದರಿಂದಾಗಿ ಕೇಂದ್ರ ಸರ್ಕಾರದ ಅಡಿಯಲ್ಲಿ ಯಾವ ಸಚಿವಾಲಯಗಳು ಮತ್ತು ಇಲಾಖೆಗಳು ಅಸ್ತಿತ್ವದಲ್ಲಿರುತ್ತವೆ ಎಂಬುದು ಅವರಿಗೆ ತಿಳಿಯುತ್ತದೆ ಎಂದು ಹೇಳಿದ್ದಾರೆ.

1947-2014ರವರೆಗೆ ದೇಶದ ಚುಕ್ಕಾಣಿ ಹಿಡಿದಿದ್ದ ಪ್ರತಿಪಕ್ಷಗಳಲ್ಲಿ ವಿಶೇಷವಾಗಿ ಕಾಂಗ್ರೆಸ್‌ನ್ನು ಟೀಕಿಸಿದ ಸಿಂಗ್, 'ಪೀಳಿಗೆಯ ನಂತರ ಪೀಳಿಗೆಗೆ ಆಳ್ವಿಕೆ ನಡೆಸಿದವರು', ಮೀನುಗಾರಿಕೆಗೆ ಕೇಂದ್ರದ ಹಂಚಿಕೆಯ ಮೂಲಕ ಕೇವಲ ₹ 3,682 ಕೋಟಿ ಮಾತ್ರ ನೀಡಿದ್ದಾರೆ, ಆದರೆ 2014ರಿಂದ ನರೇಂದ್ರ ಮೋದಿ ಸರ್ಕಾರ ₹ 32,000 ಕೋಟಿ ನೀಡಿದೆ. ರಾಹುಲ್ ಗಾಂಧಿಯವರ ಹೇಳಿಕೆಗಳಿಂದ ನನಗೆ ನೋವುಂಟಾಗಿದೆ ಎಂದರು.

'ಕೇಂದ್ರದಲ್ಲಿ ಯಾವುದೇ ಮೀನುಗಾರಿಕೆ ಇಲಾಖೆ ಇಲ್ಲ ಮತ್ತು 'ನಾನು ಅಧಿಕಾರಕ್ಕೆ ಬಂದರೆ ಮೀನುಗಾರಿಕೆಗಾಗಿ ಪ್ರತ್ಯೇಕ ಸಚಿವಾಲಯವನ್ನು ಮಾಡುತ್ತೇನೆ'... ನಾನು ಸಾಂವಿಧಾನಿಕ ವಿಷಯವನ್ನು ಎತ್ತುತ್ತಿದ್ದೇನೆ' ಎಂದು ರಾಹುಲ್ ಗಾಂಧಿ ಹೇಳಿರುವುದಾಗಿ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾಗಿರುವ ಸಿಂಗ್ ಹೇಳಿದರು.

ADVERTISEMENT

'ದಯವಿಟ್ಟು ಅವರ ನಾಯಕನನ್ನು (ಕಾಂಗ್ರೆಸ್) ಶಾಲೆಗೆ ಕಳುಹಿಸಿ. ಯಾವ ಸಚಿವಾಲಯಗಳು, ಇಲಾಖೆಗಳು ಅಸ್ತಿತ್ವದಲ್ಲಿವೆ ಎಂಬುದನ್ನು ಅವರಿಗೆ ಹೇಳಿ, ಇಲ್ಲದಿದ್ದರೆ ಒಕ್ಕೂಟದ ಅಡಿಯಲ್ಲಿ ಯಾವ ಸಚಿವಾಲಯಗಳಿವೆ ಎಂಬುದನ್ನು ಅವರು ಮರೆತುಬಿಡುತ್ತಾರೆ' ಎಂದು ಸಿಂಗ್ ಟೀಕಿಸಿದರು.

2018-19ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಎರಡು ಇಲಾಖೆಗಳನ್ನು ರಚಿಸಿದರು, ಅದರಲ್ಲಿ ಮೀನುಗಾರಿಕೆ ಇಲಾಖೆ ಅಸ್ತಿತ್ವದಲ್ಲಿದೆ ಎಂಬುದು ತಿಳಿಯದವರು ಕೂಡ ನಾಯಕರು ಎನಿಸಿಕೊಂಡಿದ್ದಾರೆ. ಕಾಂಗ್ರೆಸ್ ಆಳ್ವಿಕೆಗೆ ಹೋಲಿಸಿದರೆ ಆಗ ಶೇ 5.27 ರಷ್ಟಿದ್ದ ಮೀನುಗಾರಿಕೆ ಕ್ಷೇತ್ರದ ಬೆಳವಣಿಗೆ ಮೋದಿ ಸರ್ಕಾರದ ಅಡಿಯಲ್ಲಿ ಶೇ 10.87 ರಷ್ಟಿದೆ ಎಂದು ಸಿಂಗ್ ಹೇಳಿದರು.

ಕಳೆದ ತಿಂಗಳು ರಾಹುಲ್ ಗಾಂಧಿ ಪ್ರತ್ಯೇಕ ಮೀನುಗಾರಿಕೆ ಸಚಿವಾಲಯದ ಅಗತ್ಯತೆಯ ಬಗ್ಗೆ ಮಾತನಾಡಿದ್ದರು. ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಹಲವಾರು ಕೇಂದ್ರ ಸಚಿವರು ಮತ್ತು ಬಿಜೆಪಿ ಮುಖಂಡರು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಈಗಾಗಲೇ ಅಸ್ತಿತ್ವದಲ್ಲಿದೆ ಎಂದು ಗಮನಸೆಳೆದು ಅಪಹಾಸ್ಯ ಮಾಡಿದ್ದರು.

ಫೆಬ್ರವರಿ 2 ರಂದು ಲೋಕಸಭೆಯಲ್ಲಿ ಗಾಂಧಿಯವರ ಪ್ರಶ್ನೆಗೆ ಲಿಖಿತ ಪ್ರತಿಕ್ರಿಯೆಯಲ್ಲಿ ಸಿಂಗ್ ಅವರ ಪರವಾಗಿ ಸಚಿವ ಪ್ರತಾಪ್ ಚಂದ್ರ ಸಾರಂಗಿ ಉತ್ತರಿಸಿ, ಮೀನುಗಾರಿಕೆ ಕ್ಷೇತ್ರಕ್ಕೆ ಮೂಲಸೌಕರ್ಯ ಅಗತ್ಯತೆಗಳನ್ನು ಪೂರೈಸುವ ಸಲುವಾಗಿ, 2018-19ರ ಅವಧಿಯಲ್ಲಿ ಮೀನುಗಾರಿಕೆ ಇಲಾಖೆ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವನ್ನು ರಚಿಸಲಾಗಿದೆ. ಇದನ್ನು ಮೀಸಲಿಟ್ಟ ಮೀನುಗಾರಿಕೆ ಮತ್ತು ಅಕ್ವಾಕಲ್ಚರ್ ಮೂಲಸೌಕರ್ಯ ಅಭಿವೃದ್ಧಿಯ ₹ 7,522.48 ನಿಧಿಯೊಂದಿಗೆ (ಎಫ್‌ಐಡಿಎಫ್) ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ನಂತರ ಸ್ಪಷ್ಟನೆ ನೀಡಿದ್ದ ರಾಹುಲ್, ಮೀನುಗಾರಿಕೆಗಾಗಿ ಪ್ರತ್ಯೇಕ ಸಚಿವಾಲಯವನ್ನು ಉಲ್ಲೇಖಿಸಿದ್ದಾಗಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.