ನವದೆಹಲಿ: ಶ್ರಮಿಕ ವಿಶೇಷ ರೈಲುಗಳ ಸಂಚಾರ ವಿಷಯದಲ್ಲಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ನಡುವೆ ಜಟಾಪಟಿ ಆರಂಭವಾಗಿದೆ.
ಮಹಾರಾಷ್ಟ್ರದಿಂದ ವಲಸೆ ಕಾರ್ಮಿಕರನ್ನು ತಮ್ಮ ತವರಿಗೆ ಕಳುಹಿಸಲು ಅಗತ್ಯವಿರುವಷ್ಟು ಶ್ರಮಿಕ ವಿಶೇಷ ರೈಲುಗಳನ್ನು ಒದಗಿಸಿಲ್ಲ ಎಂದು ಉದ್ಧವ್ ಠಾಕ್ರೆ ರೈಲ್ವೆ ಇಲಾಖೆ ವಿರುದ್ಧ ಕಿಡಿಕಾರಿದ್ದರು.
ಬಳಿಕ ಸರಣಿ ಟ್ವೀಟ್ ಮೂಲಕ ಗೋಯಲ್ ಅವರು, ಮುಖ್ಯಮಂತ್ರಿ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ.
’ರೈಲ್ವೆ ಮಾರ್ಗಸೂಚಿ ಅನ್ವಯ ಪ್ರಯಾಣಿಕರ ಪಟ್ಟಿಯನ್ನು ಆಯಾ ರಾಜ್ಯಗಳು ಮೊದಲು ರೈಲ್ವೆ ಇಲಾಖೆಗೆ ಸಲ್ಲಿಸಬೇಕು. ಬಳಿಕ, ರೈಲ್ವೆ ನಿಲ್ದಾಣಕ್ಕೆ ಅವರನ್ನು ಕರೆತರಬೇಕು. ಮಹಾರಾಷ್ಟ್ರದಿಂದ 125 ರೈಲುಗಳ ಸಂಚರಿಸಲು ಸಿದ್ಧ. ಆದರೆ, 125 ರೈಲುಗಳ ಪ್ರಯಾಣಿಕರ ಪಟ್ಟಿ ಎಲ್ಲಿದೆ? ಸೋಮವಾರ ನಸುಕಿನ 2 ಗಂಟೆಯವರೆಗೆ ಕೇವಲ 46 ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರ ಪಟ್ಟಿ ನೀಡಲಾಗಿದೆ. ಇವುಗಳಲ್ಲಿ ಐದು ಪಶ್ಚಿಮ ಬಂಗಾಳ ಮತ್ತು ಒಡಿಶಾಗೆ ಸೇರಿವೆ. ಆದರೆ, ಅಲ್ಲಿ ಚಂಡಮಾರುತದ ಕಾರಣದಿಂದ ರೈಲು ಸಂಚರಿಸುವುದಿಲ್ಲ. ಹೀಗಾಗಿ, ಈಗ ಕೇವಲ 41 ರೈಲುಗಳ ಸಂಚಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ‘ ಎಂದು ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.
ಮೇ 1ರಿಂದ 2600 ಶ್ರಮಿಕ ರೈಲುಗಳು ಸಂಚರಿಸಿದ್ದು, 35 ಲಕ್ಷ ವಲಸೆ ಕಾರ್ಮಿಕರನ್ನು ತವರಿಗೆ ಕಳುಹಿಸಲಾಗಿದೆ ಎಂದು ರೈಲ್ವೆ ಇಲಾಖೆ ಶನಿವಾರ ತಿಳಿಸಿತ್ತು. ಮುಂದಿನ 10 ದಿನಗಳಲ್ಲಿ ಮತ್ತೆ 2600 ಶ್ರಮಿಕ ರೈಲುಗಳ ಮೂಲಕ 36 ಲಕ್ಷ ವಲಸೆ ಕಾರ್ಮಿಕರಿಗೆ ಸಂಚಾರ ಸೌಲಭ್ಯ ಕಲ್ಪಿಸಲಾಗುವುದು ಎಂದು ಅದು ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.