ADVERTISEMENT

ಕೇರಳದಲ್ಲಿ ಧಾರಾಕಾರ ಮಳೆ: ಮೂರು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಣೆ

4 ಮಂದಿ ಬಲಿ

ಪಿಟಿಐ
Published 26 ಜೂನ್ 2025, 14:51 IST
Last Updated 26 ಜೂನ್ 2025, 14:51 IST
ಭಾರಿ ಮಳೆಯಿಂದ ಅರ್ಧ ಮುಳುಗಡೆಯಾದ ಎರ್ನಾಕುಲಂ ಜಿಲ್ಲೆಯ ಅಳುವಾದಲ್ಲಿರುವ ಮಹದೇವ ದೇವಾಲಯದ ಸಮೀಪದ ಪೆರಿಯಾರ್‌ ನದಿಯಲ್ಲಿ ಗುರುವಾರ ಭಕ್ತರೊಬ್ಬರು ಪುಣ್ಯಸ್ನಾನ ಮಾಡಿದರು–ಪಿಟಿಐ ಚಿತ್ರ
ಭಾರಿ ಮಳೆಯಿಂದ ಅರ್ಧ ಮುಳುಗಡೆಯಾದ ಎರ್ನಾಕುಲಂ ಜಿಲ್ಲೆಯ ಅಳುವಾದಲ್ಲಿರುವ ಮಹದೇವ ದೇವಾಲಯದ ಸಮೀಪದ ಪೆರಿಯಾರ್‌ ನದಿಯಲ್ಲಿ ಗುರುವಾರ ಭಕ್ತರೊಬ್ಬರು ಪುಣ್ಯಸ್ನಾನ ಮಾಡಿದರು–ಪಿಟಿಐ ಚಿತ್ರ   

ತಿರುವನಂತಪುರ: ಕೇರಳದಲ್ಲಿ ಗುರುವಾರ ಧಾರಾಕಾರ ಮಳೆ ಮುಂದುವರಿದಿದ್ದು, ರಾಜ್ಯದ ವಿವಿಧೆಡೆ ನಾಲ್ಕು ಮಂದಿ ಮೃತಪಟ್ಟಿದ್ದಾರೆ.

ಕಣ್ಣೂರಿನಲ್ಲಿ ಮಿಂಚಿನ ಹೊಡೆತಕ್ಕೆ ರಾಜೀವ್‌ (54) ಎಂಬುವವರು ಮೃತಪಟ್ಟಿದ್ದು, ತಿರುವನಂತಪುರ
ದಲ್ಲಿ ನದಿಯಲ್ಲಿ ಮುಳುಗಿದ ಸೂರಜ್‌, ಪಾಲಕ್ಕಾಡ್‌ನ ಭಾರತ್‌ಪುರಳ ಪಟ್ಟಂಬಿಯಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ಪ್ರಣವ್‌(20) ಮೃತದೇಹವು ನದಿಯಲ್ಲಿ ಗುರುವಾರ ಸಿಕ್ಕಿದೆ. ತಿರುವನಂತಪುರದ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ರೊಬ್ಬರು ಕಣ್ಮರೆಯಾಗಿದ್ದಾರೆ. 

ರೆಡ್‌ ಅಲರ್ಟ್: ಎರ್ನಾಕುಲ, ಇಡುಕ್ಕಿ ಹಾಗೂ ತ್ರಿಶ್ಶೂರ್‌ ಜಿಲ್ಲೆಯ ತಗ್ಗು‍ಪ್ರದೇಶಗಳಿಗೆ ನೀರು ನುಗ್ಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ರಾಜ್ಯದ ಮೂರು ಜಿಲ್ಲೆಗಳಿಗೆ ‘ರೆಡ್‌ ಅಲರ್ಟ್‌’ ಘೋಷಿಸಿದೆ. ಭಾರಿ ಮಳೆ ಹಾಗೂ ಬಿರುಸಾದ ಗಾಳಿಯಿಂದ ರಾಜಧಾನಿ ತಿರುವನಂತಪುರ ಸೇರಿದಂತೆ ಕೇರಳದ ಹಲವು ಜಿಲ್ಲೆಗಳಲ್ಲಿ ಮರ, ವಿದ್ಯುತ್‌ ಕಂಬಗಳು ಬುಡಸಮೇತ ಉರುಳಿಬಿದ್ದಿವೆ. ಹಲವೆಡೆ ಹೋರ್ಡಿಂಗ್‌ಗಳು ಕೆಳಗುರುಳಿವೆ.

ADVERTISEMENT

ಇಡುಕ್ಕಿ, ಮಲಪ್ಪುರ, ವಯನಾಡ್‌ ಜಿಲ್ಲೆಗಳಿಗೆ ಐಎಂಡಿಯು ‘ರೆಡ್‌ ಅಲರ್ಟ್’ ಘೋಷಿಸಿದ್ದು, ಉಳಿದ ಏಳು ಜಿಲ್ಲೆಗಳಿಗೆ ‘ಆರೆಂಜ್‌ ಅಲರ್ಟ್‌’ ಘೋಷಿಸಿದೆ.

ಭಾರಿ ಮಳೆಯಿಂದ ಈ ವಾರ ನದಿಗಳು ಉಕ್ಕಿ  ಹರಿಯಲಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ರಾಜ್ಯ ನೀರಾವರಿ ಇಲಾಖೆಯು ಎಚ್ಚರಿಕೆ ಸಂದೇಶ ರವಾನಿಸಿದೆ. ಎರ್ನಾಕುಲಂನ ಮೂವಟ್ಟುಪುಳ, ತ್ರಿಶ್ಶೂರ್‌, ಮಲಪ್ಪುರಂನಲ್ಲಿ ಹರಿಯುವ ಭಾರತ್‌‍ಪುಳ, ಪತ್ತನಂತಿಟ್ಟ ಜಿಲ್ಲೆಯ ಪಂಪಾ ನದಿ, ಕೊಟ್ಟಾಯಂನ ಮಣಿಮಲ, ಇಡುಕ್ಕಿಯ ತೋಡುಪುಳ, ವಯನಾಡ್‌ನ ಕಬಿನಿ ನದಿ ತೀರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸರ್ಕಾರ ಸೂಚನೆ ನೀಡಿದೆ.

ಮಳೆಯಿಂದ ಎರ್ನಾಕುಲ, ತ್ರಿಶ್ಶೂರ್‌, ಇಡುಕ್ಕಿ ಜಿಲ್ಲೆಯ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ನೂರಾರು ಮಂದಿಯನ್ನು ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಕಳೆದ ವರ್ಷ ಮಳೆಯಿಂದ ಭೀಕರ ಭೂಕುಸಿತಕ್ಕೆ ಸಾಕ್ಷಿಯಾಗಿದ್ದ ಮುಂಡಕ್ಕೈ ಮತ್ತು ಚೂರಲ್‌ಮಲ ಭಾಗದಲ್ಲಿ ನದಿಯು ಉಕ್ಕಿ ಹರಿಯುತ್ತಿದ್ದು, ಕೆಸರು ಹರಿದುಬರುತ್ತಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಮನೆ
ಮಾಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.