ADVERTISEMENT

ರಾಜ್ಯಪಾಲ ಕಲ್ಯಾಣ್‌ ಸಿಂಗ್‌ ಮೇಲಿನ ನೀತಿಸಂಹಿತೆ ಉಲ್ಲಂಘನೆ ಆರೋಪ ಸಾಬೀತು

ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ರಾಜಸ್ಥಾನ ರಾಜ್ಯಪಾಲ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 5:54 IST
Last Updated 2 ಏಪ್ರಿಲ್ 2019, 5:54 IST
   

ನವದೆಹಲಿ: ನರೇಂದ್ರ ಮೋದಿ ಅವರು ಗೆದ್ದುಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಹೇಳುವ ಮೂಲಕ ರಾಜಸ್ಥಾನ ರಾಜ್ಯಪಾಲ ಕಲ್ಯಾಣ್‌ ಸಿಂಗ್‌ ಅವರು ನೀತಿ ಸಂಹಿತೆ ಉಲ್ಲಂಘಿಸಿರುವುದನ್ನು ಚುನಾವಣೆ ಆಯೋಗದ ಪತ್ತೆ ಹಚ್ಚಿದೆ. ಈ ಬಗ್ಗೆ ರಾಷ್ಟ್ರಪತಿಗೆ ಪತ್ರ ಬರೆಯಲು ಆಯೋಗ ನಿರ್ಧರಿಸಿದೆ.

ಉತ್ತರ ಪ್ರದೇಶದ ಅಲಿಗಢ ಲೋಕಸಭೆ ಕ್ಷೇತ್ರದ ಹಾಲಿ ಸಂಸದ ಸತೀಶ್‌ ಗೌತಮ್‌ ಅವರಿಗೆ ಬಿಜೆಪಿ ಟಿಕೆಟ್‌ ನಿರಾಕರಣೆ ಮಾಡುತ್ತಲೇ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದರು. ಪಕ್ಷದ ನಡೆಯಿಂದ ಅಸಮಾಧಾನ ಮೂಡಿತ್ತು. ಪ್ರತಿಭಟನೆ ಮತ್ತು ಅಸಮಾಧಾನಗಳನ್ನು ನಿಗ್ರಹಿಸುವ ಉದ್ದೇಶದಿಂದ ಮಾರ್ಚ್‌ 23ರಂದು ಅಲಿಗಢದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ರಾಜಸ್ಥಾನದ ರಾಜ್ಯಪಾಲ ಕಲ್ಯಾಣ್‌ ಸಿಂಗ್‌, ’ ನರೇಂದ್ರ ಮೋದಿ ಅವರು ಮತ್ತೊಮ್ಮೆ ಗೆಲ್ಲಬೇಕು ಎಂದು ಪ್ರತಿಯೊಬ್ಬರೂ ಅಪೇಕ್ಷಿಸುತ್ತಿದ್ದಾರೆ. ಅವರು ಗೆಲ್ಲುವುದು ದೇಶಕ್ಕೆ ಅಗತ್ಯವೂ ಕೂಡ,’ ಎಂದು ಹೇಳಿದ್ದರು.

’ನಾವೆಲ್ಲರೂ ಬಿಜೆಪಿ ಕಾರ್ಯಕರ್ತರು. ಹಾಗಾಗಿ ಬಿಜೆಪಿ ಗೆಲ್ಲಬೇಕೆಂಬುದು ನಮ್ಮ ಅಪೇಕ್ಷೆ. ದೇಶದ ಪ್ರತಿಯೊಬ್ಬರೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಬಯಸುತ್ತಿದ್ದಾರೆ. ರಾಷ್ಟ್ರ ಮತ್ತು ಸಮಾಜಕ್ಕಾಗಿ ಮೋದಿ ಗೆಲ್ಲುವುದು ಅಗತ್ಯವೂ ಕೂಡ ಎಂದು ಅವರು ಹೇಳಿಕೊಂಡಿದ್ದರು. ಈ ಮೂಲಕ ಸಾಂವಿಧಾನಿಕ ಹುದ್ದೆಯಲ್ಲಿದ್ದೂ ಅವರು ಪಕ್ಷವೊಂದರ ಪರವಾಗಿ ಮಾತನಾಡಿ ನೀತಿ ಸಂಹಿತೆ ಉಲ್ಲಂಘಿಸಿದ್ದರು. ಕಲ್ಯಾಣ್‌ ಸಿಂಗ್‌ ಅವರ ಹೇಳಿಕೆ ಭಾರಿ ವಿವಾದಕ್ಕೂ ಕಾರಣವಾಗಿತ್ತು.

ADVERTISEMENT

ಇದೇ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣೆ ಆಯೋಗವು ಉತ್ತರ ಪ್ರದೇಶದ ಚುನಾವಣೆ ಆಯೋಗದಿಂದ ವರದಿ ಕೇಳಿತ್ತು. ವರದಿಗಳನ್ನು ಪರಾಮರ್ಶೆ ಮಾಡಿರುವ ಕೇಂದ್ರ ಚುನಾವಣೆ ಆಯೋಗ, ಕಲ್ಯಾಣ್‌ ಸಿಂಗ್‌ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವುದನ್ನು ಮನಗಂಡಿದೆ.

ಇದೇ ವಿವಾದದಲ್ಲಿ ಸ್ಥಾನ ಕಳೆದುಕೊಂಡಿದ್ದ ಗುಲ್ಶರ್‌ ಅಹ್ಮದ್‌

ಇದೇ ರೀತಿಯ ಘಟನೆಯೊಂದು 90ರ ದಶಕದಲ್ಲಿ ನಡೆದಿತ್ತು.ಹಿಮಾಚಲಪ್ರದೇಶದ ಅಂದಿನ ರಾಜ್ಯಪಾಲರಾಗಿದ್ದ ಗುಲ್ಶರ್‌ ಅಹ್ಮದ್‌, ಮಧ್ಯಪ್ರದೇಶದಲ್ಲಿ ಪುತ್ರನ ಪರವಾಗಿ ಪ್ರಚಾರ ಕಾರ್ಯ ಕೈಗೊಂಡಿದ್ದರು. ಈ ಬಗ್ಗೆಚುನಾವಣೆ ಆಯೋಗದ ಆಕ್ಷೇಪ ವ್ಯಕ್ತಪಡಿಸಿತ್ತು. ಆಡಳಿತ ಯಂತ್ರವನ್ನು ಗುಲ್ಶರ್‌ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆಯೋಗ ಹೇಳಿತ್ತು.ನಂತರ ಗುಲ್ಶರ್‌ ಅವರು ರಾಜ್ಯಪಾಲ ಹುದ್ದೆ ತೊರೆಯುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.