ADVERTISEMENT

ರಾಜಸ್ಥಾನ: ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಮತ್ತೆ ಪ್ರಸ್ತಾವ ಸಲ್ಲಿಸಲು ನಿರ್ಧಾರ

ಪಿಟಿಐ
Published 25 ಜುಲೈ 2020, 6:10 IST
Last Updated 25 ಜುಲೈ 2020, 6:10 IST
ಅಶೋಕ್ ಗೆಹ್ಲೋಟ್
ಅಶೋಕ್ ಗೆಹ್ಲೋಟ್   

ಜೈಪುರ: ರಾಜಸ್ಥಾನ ವಿಧಾನಸಭೆಯ ಅಧಿವೇಶನವನ್ನು ಕರೆಯಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿ ಹೊಸ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಕಳುಹಿಸಲಿದೆ.

ಸಚಿನ್ ಪೈಲಟ್ ನೇತೃತ್ವದಲ್ಲಿ 18 ಶಾಸಕರ ಬಂಡಾಯವನ್ನು ಎದುರಿಸುತ್ತಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಶುಕ್ರವಾರ ರಾತ್ರಿ ಈ ಸಂಬಂಧ ಸಂಪುಟ ಸಭೆ ನಡೆಸಿದರು. ಈ ವೇಳೆ ಅವರು, ರಾಜ್ಯಪಾಲರು ಎತ್ತಿರುವ ಆಕ್ಷೇಪಗಳ ಕುರಿತು ಚರ್ಚೆ ನಡೆಸಿದರು.

ಶನಿವಾರ ಮತ್ತೆ ಸಂಪುಟ ಸಭೆ ಸೇರಲಿದ್ದು, ಬೆಳವಣಿಗೆಗಳನ್ನು ಚರ್ಚಿಸಲಿದೆ ಎಂದು ಮೂಲಗಳು ತಿಳಿಸಿವೆ. ವಿಶ್ವಾಸಮತ ಸಾಬೀತುಪಡಿಸಲು ಅನುವಾಗುವಂತೆ ಅಧಿವೇಶನ ಕರೆಯಬೇಕು ಎಂದು ಕಾಂಗ್ರೆಸ್ ಪಟ್ಟುಹಿಡಿದಿದೆ. ಸ್ಪೀಕರ್ ಅವರು ಪೈಲಟ್‌ ಮತ್ತು 18 ಶಾಸಕರಿಗೆ ನೀಡಿದ್ದ ಅನರ್ಹತೆ ನೋಟಿಸ್ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ADVERTISEMENT

ಸರ್ಕಾರಕ್ಕೆ ಈಗಾಗಲೇ ಬಹುಮತ ಇರುವಾಗ ಮತ್ತೆ ವಿಶ್ವಾಸಮತ ಸಾಬೀತುಪಡಿಸುವ ಅಗತ್ಯವೇನು ಎಂದು ರಾಜ್ಯಪಾಲರು ಶುಕ್ರವಾರ ಗೆಹ್ಲೋಟ್ ನೇತೃತ್ವದ ಸರ್ಕಾರವನ್ನು ಪ್ರಶ್ನಿಸಿದ್ದರು.

ಸರ್ಕಾರಕ್ಕೆ ಬರೆದಿದ್ದ ಪತ್ರದಲ್ಲಿ ಆರು ಅಂಶಗಳನ್ನೂ ರಾಜ್ಯಪಾಲರು ಉಲ್ಲೇಖಿಸಿದ್ದರು. ಇದರಲ್ಲಿ ಸಂವಿಧಾನಕ್ಕಿಂತ ಯಾರೂ ದೊಡ್ಡವರಲ್ಲ. ಒತ್ತಡ ತಂತ್ರ ರಾಜಕಾರಣ ಅನುಸರಿಸುವ ಅಗತ್ಯವಿಲ್ಲ ಎಂದು ಹೇಳಿದರು.

ಅಧಿವೇಶನ ಕರೆಯಬೇಕು ಎಂದು ಕೋರಿ ಈಗ ಕಳುಹಿಸಿದ್ದ ಪತ್ರದಲ್ಲಿ ಯಾವುದೇ ದಿನಾಂಕವನ್ನು ನಮೂದಿಸಿಲ್ಲ ಹಾಗೂ ಸಚಿವ ಸಂಪುಟ ಅನುಮೋದನೆ ನೀಡಿರುವ ಉಲ್ಲೇಖವೂ ಇಲ್ಲ ಎಂಬುದನ್ನು ರಾಜ್ಯಪಾಲರು ಉಲ್ಲೇಖಿಸಿದ್ದರು. ವಿಧಾನಸಭೆಯ ಎಲ್ಲ ಸದಸ್ಯರ ಮುಕ್ತ ಸಂಚಾರ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆಯಾಗದ ರೀತಿ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದ್ದರು.

ಗೆಹ್ಲೋಟ್ ಅವರಿಗೆ ನಿಷ್ಠರಾಗಿರುವ ಶಾಸಕರು ಶುಕ್ರವಾರ ಸುಮಾರು 5 ಗಂಟೆ ಕಾಲ ರಾಜಭವನ ಆವರಣದಲ್ಲಿ ಧರಣಿ ನಡೆಸಿದ್ದು, ಅಧಿವೇಶನ ಕರೆಯಬೇಕು ಎಂದು ಒತ್ತಡ ಹೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.