ರೈಲು
– ಪ್ರಜಾವಾಣಿ ಚಿತ್ರ
ಭೋಪಾಲ್: ಮಧ್ಯಪ್ರದೇಶದಲ್ಲಿ ರಾಜಧಾನಿ ಎಕ್ಸ್ಪ್ರೆಸ್ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್ಪ್ರೆಸ್ (22691) ರೈಲು ಶುಕ್ರವಾರ ರಾತ್ರಿ ಹೊರಟಿತ್ತು. ಮಧ್ಯಪ್ರದೇಶದ ರಾಣಿ ಕಮಲಾಪತಿ (ಹಬೀಬ್ಗಂಜ್) ಮತ್ತು ಭೋಪಾಲ್ ನಿಲ್ದಾಣ ನಡುವೆ ರೈಲಿನ ಮೇಲೆ ಕಲ್ಲುತೂರಾಟ ನಡೆದಿದೆ. ಘಟನೆ ಕುರಿತು ರೈಲ್ವೆ ಸುರಕ್ಷತಾ ಪಡೆ ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಕಲ್ಲು ತೂರಾಟದಲ್ಲಿ ಕಿಟಕಿ ಗಾಜುಗಳು ಒಡೆದಿವೆ. ಒಳಗೆ ಊಟ ಮಾಡುತ್ತಿದ್ದವರ ತಟ್ಟೆಗೆ ಕಲ್ಲುಗಳು ಬಿದ್ದಿವೆ. ಯಾರಿಗೂ ಗಾಯಗಳಾಗಿಲ್ಲ. ಬಿ–4 ಕೋಚ್ನ ಪ್ರಯಾಣಿಕರೊಬ್ಬರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಆರ್ಪಿಎಫ್ ಭೋಪಾಲ್ ವಿಭಾಗದ ಕಮಾಂಡೆಂಟ್ ಪ್ರಶಾಂತ್ ಯಾದವ್ ತಿಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಪ್ರಯಾಣಿಕರೂ ಆದ ಮಹಾರಾಷ್ಟ್ರದ ಬಿಜೆಪಿ ಮುಖಂಡ ಚಂದನ್ ಗೋಸ್ವಾಮಿ, ‘ಬಿ–4 ಕೋಚ್ ಅನ್ನೇ ಗುರಿಯಾಗಿಸಿ ಕಲ್ಲು ತೂರಾಟ ನಡೆದಿದೆ. ಗಾಜಿಗೆ ಬಡಿದ ಕಲ್ಲಿನಿಂದ ನಾನು ಪಾರಾದೆ. ಈ ದುಷ್ಕೃತ್ಯ ನಡೆಸಿದವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.