ADVERTISEMENT

ರಾಜ್ಯಸಭೆ ಚುನಾವಣೆ: ರಾಜಸ್ಥಾನದಲ್ಲಿ 3 ಸ್ಥಾನ ಗೆದ್ದ ಕಾಂಗ್ರೆಸ್‌

ಪಿಟಿಐ
Published 10 ಜೂನ್ 2022, 19:53 IST
Last Updated 10 ಜೂನ್ 2022, 19:53 IST
ಕಾಂಗ್ರೆಸ್
ಕಾಂಗ್ರೆಸ್    

ಜೈಪುರ/ನವದೆಹಲಿ: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ರಾಜಸ್ಥಾನದಿಂದ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್ ಶುಕ್ರವಾರ ಹೇಳಿದ್ದಾರೆ.

ಒಂದು ಸ್ಥಾನ ಬಿಜೆಪಿ ಪಾಲಾಗಿದೆ. ಝೀ ಸಮೂಹದ ಅಧ್ಯಕ್ಷ ಸುಭಾಷ್‌ ಚಂದ್ರ ಅವರು ಬಿಜೆಪಿ ಬೆಂಬಲದಲ್ಲಿ ಪಕ್ಷೇತರರಾಗಿ ಐದನೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಸುಭಾಷ್‌ ಚಂದ್ರ ಅವರಿಗೆ ಸೋಲಾಗಿದೆ.

ಕಾಂಗ್ರೆಸ್‌ನ ರಣದೀಪ್‌ ಸುರ್ಜೇವಾಲಾ, ಮುಕುಲ್‌ ವಾಸ್ನಿಕ್‌ ಮತ್ತು ಪ್ರಮೋದ್ ತಿವಾರಿ, ಬಿಜೆಪಿಯ ಘನಶ್ಯಾಮ್‌ ತಿವಾರಿ ಗೆದ್ದವರು.ಬಿಜೆಪಿಯ ಶಾಸಕಿ ಶೋಭಾರಾಣಿ ಕುಶ್ವಾಹಾ ಅವರನ್ನು ಕಾಂಗ್ರೆಸ್ ಅಭ್ಯರ್ಥಿಗೆ ‘ಅಡ್ಡ ಮತ’ ಹಾಕಿದ ಕಾರಣಕ್ಕೆ ಪಕ್ಷದಿಂದ ಅಮಾನತು ಮಾಡಲಾಗಿದೆ.

ADVERTISEMENT

ಮಹಾರಾಷ್ಟ್ರದ ಆರು ಮತ್ತು ಹರಿಯಾಣದ ಎರಡು ಸ್ಥಾನಗಳಿಗೂ ಚುನಾವಣೆ ನಡೆದಿದೆ. ಆದರೆ, ಮತದಾನದ ನಿಯಮ ಉಲ್ಲಂಘಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದ ಕಾರಣ ಎರಡೂ ರಾಜ್ಯಗಳಲ್ಲಿ ಮತ ಎಣಿಕೆಯನ್ನು ನಿಲ್ಲಿಸಲಾಗಿದೆ. ಮಹಾರಾಷ್ಟ್ರದ ಆಡಳಿತಾರೂಢ ಮಹಾ ವಿಕಾಸ ಆಘಾಡಿಯ ಮೂವರು ಶಾಸಕರು ಮತಪತ್ರಗಳನ್ನು ಏಜೆಂಟರಿಗೆ ತೋರಿಸುವ ಬದಲು ಅವರ ಕೈಗೆ ಕೊಟ್ಟಿದ್ದಾರೆ. ಹಾಗಾಗಿ, ಅವರ ಮತಗಳನ್ನು ಅಸಿಂಧುಗೊಳಿಸಬೇಕು ಎಂದು ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.