ADVERTISEMENT

2005ರ ಅಯೋಧ್ಯೆ ದಾಳಿ ಪ್ರಕರಣ: ನಾಲ್ವರು ಉಗ್ರರಿಗೆ ಜೀವಾವಧಿ ಶಿಕ್ಷೆ

ರಾಮಜನ್ಮಭೂಮಿ–ಬಾಬ್ರಿ ಮಸೀದಿ ಸಂಕೀರ್ಣ ಮೇಲೆ ನಡೆದಿದ್ದ ದಾಳಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 4:06 IST
Last Updated 19 ಜೂನ್ 2019, 4:06 IST
   

ಲಖನೌ: ಹದಿನಾಲ್ಕು ವರ್ಷಗಳ ಹಿಂದೆ ರಾಮಜನ್ಮಭೂಮಿ–ಬಾಬ್ರಿ ಮಸೀದಿ ಸಂಕೀರ್ಣದ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಲಷ್ಕರ್‌–ಎ–ತಯಬಾದ (ಎಲ್‌ಇಟಿ) ನಾಲ್ವರು ಉಗ್ರರಿಗೆ ಪ್ರಯಾಗ್‌ರಾಜ್‌ನಲ್ಲಿನ ವಿಶೇಷ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಡಾ.ಇರ್ಫಾನ್‌, ಮೊಹ್ಮದ್‌ ಶಕೀಲ್‌, ಮೊಹ್ಮದ್‌ ನಫೀಸ್‌ ಹಾಗೂ ಆಸೀಫ್‌ ಇಕ್ಬಾಲ್‌ ಅಲಿಯಾಸ್‌ ಫಾರೂಕ್‌ ಶಿಕ್ಷೆಗೆ ಒಳಗಾಗಿದ್ದಾರೆ. ಇವರಿಗೆ ತಲಾ ₹ 20 ಸಾವಿರ ದಂಡವನ್ನೂ ವಿಧಿಸಲಾಗಿದೆ. ಸಾಕ್ಷ್ಯಗಳ ಕೊರತೆ ಕಾರಣ ಐದನೇ ಆರೋಪಿ ಮೊಹ್ಮದ್‌ ಅಜೀಜ್‌ ಅವರನ್ನು ದೋಷಮುಕ್ತಗೊಳಿಸಿ ವಿಶೇಷ ನ್ಯಾಯಾಧೀಶ ದಿನೇಶ್‌ ಚಂದ್ರ ತೀರ್ಪು ನೀಡಿದ್ದಾರೆ.

2005ರ ಜುಲೈ5ರಂದು ಗ್ರೆನೇಡ್‌ ಹಾಗೂ ರಾಕೆಟ್‌ ಲಾಂಚರ್‌ಗಳಿಂದ ದಾಳಿ ನಡೆಸಿದ್ದ ಎಲ್‌ಇಟಿಗೆ ಸೇರಿದ ಉಗ್ರರು, ತಾತ್ಕಾಲಿಕವಾಗಿ ನಿರ್ಮಿಸಿದ್ದ ದೇವಸ್ಥಾನದ ಗೋಡೆಯ ಒಂದು ಭಾಗವನ್ನು ಧ್ವಂಸ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿದ್ದ ಸಿಆರ್‌ಪಿಎಫ್‌ ಯೋಧರು, ಐವರು ಉಗ್ರರನ್ನು ಹೊಡೆದುರುಳಿಸಿದ್ದರು. ದಾಳಿಯಲ್ಲಿ ಇಬ್ಬರು ನಾಗರಿಕರು ಹಾಗೂ ಒಬ್ಬ ಪ್ರವಾಸಿ ಗೈಡ್‌ ಸಹ ಮೃತಪಟ್ಟಿದ್ದರು.

ADVERTISEMENT

ಬಿಗಿ ಭದ್ರತೆ: ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.