ADVERTISEMENT

ಮಂದಿರ ಮರುನಿರ್ಮಾಣದಿಂದ ಮೌಲ್ಯಗಳ ರಕ್ಷಣೆ: ವೆಂಕಯ್ಯ ನಾಯ್ಡು

ರಾಮರಾಜ್ಯ ಉಪಮೆಯನ್ನು ಗಾಂಧೀಜಿಯೂ ಬಳಸಿದ್ದರು ಎಂದ ಉಪರಾಷ್ಟ್ರಪತಿ

ಪಿಟಿಐ
Published 2 ಆಗಸ್ಟ್ 2020, 13:34 IST
Last Updated 2 ಆಗಸ್ಟ್ 2020, 13:34 IST
ರಾಮಮಂದಿರದ ಮಾದರಿ (ಸಂಗ್ರಹ ಚಿತ್ರ)
ರಾಮಮಂದಿರದ ಮಾದರಿ (ಸಂಗ್ರಹ ಚಿತ್ರ)   

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿಪೂಜೆಯನ್ನು ಚಾರಿತ್ರಿಕ ಘಟನೆ ಎಂದು ಬಣ್ಣಿಸಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಈ ಮೂಲಕ ಗತಕಾಲದ ವೈಭವ ಮತ್ತು ಆಗಿನ ಕಾಲದಲ್ಲಿದ್ದ ಮೌಲ್ಯಗಳನ್ನು ರಕ್ಷಿಸಲಾಗುತ್ತಿದೆ ಎಂದು ಹೇಳಿದ್ದಾರೆ.

‘ಮಂದಿರ ಮರುನಿರ್ಮಾಣ, ಮೌಲ್ಯಗಳ ರಕ್ಷಣೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪೋಸ್ಟ್ ಮಾಡಿರುವ ಅವರು, ‘ರಾಮನ ಚಿಂತನೆಗಳು ಮೂಲತಃ ಜಾತ್ಯತೀತವಾದುದು. ಒಂದು ಕಾಲಘಟ್ಟದ ಜನರ ಚಿಂತನೆ ಮತ್ತು ಬದುಕಿನ ಮೇಲೆ ಪ್ರಭಾವ ಬೀರಿದೆ’ ಎಂಬ ಚಿಂತಕ ಅರ್ಥರ್ ಅಂತೋನಿ ಅವರ ಮಾತು ಉಲ್ಲೇಖಿಸಿದ್ದಾರೆ.

ರಾಮರಾಜ್ಯ ಕುರಿತು ಮಾತನಾಡುತ್ತಾ ‘ಇದು, ಜನರನ್ನು ಅರ್ಥಮಾಡಿಕೊಳ್ಳುವ, ಶಾಂತಿಯುತ ಮೌಲ್ಯಗಳನ್ನು ಆಧರಿಸಿ ಜನಜೀವನ ಉತ್ತಮಪಡಿಸುವ ಹಾಗೂ ಜನರನ್ನೇ ಕೇಂದ್ರವಾಗಿಸಿಕೊಂಡ ಆಡಳಿತವನ್ನು ಉದಾಹರಿಸುತ್ತಾ ಮಹಾತ್ಮಗಾಂಧಿ ಅವರು ಬಳಸುತ್ತಿದ್ದ ಉಪಮೆಯಾಗಿದೆ’ ಎಂದು ನಾಯ್ಡು ಹೇಳಿದ್ದಾರೆ.

ಆಗಸ್ಟ್ 5ರಂದು ನಡೆಯುವ ಭೂಮಿಪೂಜೆಯು ಗತಕಾಲದ ವೈಭವ ಮತ್ತು ಸಾಂಸ್ಕೃತಿಕ ಪರಂಪರೆಯ ಜೊತೆಗೆ ಬೆಸೆಯುವ ಕಾರ್ಯಕ್ರಮವಾಗಿದೆ. ಇಂಥ ಕಾರ್ಯಕ್ರಮವನ್ನು ಸ್ವಯಂ ಪ್ರೇರಿತವಾಗಿ ಸಂಭ್ರಮಿಸಬೇಕಾಗಿದೆ ಎಂದು ಹೇಳಿದ್ದಾರೆ.

ಕಾರ್ಯಕರ್ತರಿಗೆ ಸಾಧ್ವಿ ಪತ್ರ:ಲಖನೌ: ಹಿಂದುತ್ವ ನಾಯಕಿ ಸಾಧ್ವಿ ರೀತಾಂಬರಾ, 500 ವರ್ಷಗಳ ರಾಮಜನ್ಮಭೂಮಿ ಚಳವಳಯಲ್ಲಿ ಭಾಗಿಯಾಗಿ, ತಮ್ಮ ಜೀವತ್ಯಾಗ ಮಾಡಿರುವ ಲಕ್ಷಾಂತರ ಸಹೋದರರಿಗೆ ನಮನ ಸಲ್ಲಿಸುವುದಾಗಿ ಹೇಳಿದ್ದಾರೆ. ಭೂಮಿಪೂಜೆ ದಿನ ಹತ್ತಿರವಾದಂತೆ ಅವರು ರಕ್ಷಾಬಂಧನ ನಿಮಿತ್ತ ಕಾರ್ಯಕರ್ತರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಆಂದೋಲನದಲ್ಲಿ ಭಾಗಿಯಾಗಿ ಜೀವ ತ್ಯಾಗ ಮಾಡಿರುವ, ರಕ್ತ ಸಂಬಂಧವೇ ಇಲ್ಲದ ಸಹೋದರರನ್ನು ಈಗ ಸ್ಮರಿಸುತ್ತೇನೆ. ಅವರನ್ನು ನಾನು ಭೇಟಿಯಾಗಿಲ್ಲ. ಆದರೆ, ನನ್ನ ಸಭೆಗಳಲ್ಲಿ ಭಾಗವಹಿಸಿ, ‘ಲಾಠಿ, ಗುಂಡಿನೇಟು ತಿಂದರೂ, ಅಲ್ಲಿಯೇ ಮಂದಿರ ನಿರ್ಮಿಸುತ್ತೇವೆ' ಎಂದು ಭರವಸೆ ನೀಡಿದ್ದರು ಎಂದು ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.