ನವದೆಹಲಿ:ರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಅಭ್ಯರ್ಥಿಯಾದ ದ್ರೌಪದಿ ಮುರ್ಮು ಅವರಿಗೆ ಒಡಿಶಾದ ಆಡಳಿತಾರೂಢ ಬಿಜೆಡಿ ಪಕ್ಷ ಬೆಂಬಲ ಸೂಚಿಸಿದೆ. ಇದರಿಂದ ಮುರ್ಮು ಅವರ ಗೆಲುವಿನ ಹಾದಿ ಸುಗಮವಾಗಿದೆ.
‘ಒಡಿಶಾದ ವಿಧಾನಸಭೆಯ ಎಲ್ಲ ಸದಸ್ಯರು ಪಕ್ಷಭೇದ ಮರೆತು ಒಡಿಶಾದ ಮಗಳಾದ ಮುರ್ಮು ಅವರಿಗೆ ಮತ ನೀಡುವುದರ ಮೂಲಕ ಬೆಂಬಲಿಸಿ’ ಎಂದುಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಟ್ವೀಟ್ ಮೂಲಕ ಕರೆ ನೀಡಿದ್ದಾರೆ.
ಯುಪಿಎ ಅಥವಾ ಎನ್ಡಿಎ ಕೂಟದಲ್ಲಿ ಇಲ್ಲದ ಕೆಲವೇ ಪಕ್ಷಗಳಲ್ಲಿ ಬಿಜೆಡಿ ಕೂಡ ಒಂದು. 2009ರಲ್ಲಿ ಎನ್ಡಿಎಯಿಂದ ಬಿಜೆಡಿ ಹೊರಬಂದಿತ್ತು. ಬಿಜೆಡಿ ಎಲೆಕ್ಟೋರಲ್ ಕಾಲೇಜ್ನಲ್ಲಿ ಶೇ 2.85ರಷ್ಟು ಮತಗಳ ಪಾಲನ್ನು ಹೊಂದಿದೆ. ಬಿಜೆಪಿಯು ಪ್ರಸ್ತುತ ಎಲೆಕ್ಟೋರಲ್ ಕಾಲೇಜ್ನಲ್ಲಿ ಶೇ 49ರಷ್ಟು ಮತಗಳನ್ನು ಹೊಂದಿದ್ದು, ಗೆಲ್ಲಲು ಶೇ 50ರಷ್ಟು ಮತಗಳು ಬೇಕಿವೆ. ಬಿಜೆಡಿ ಬೆಂಬಲದಿಂದ ಬಿಜೆಪಿಗೆ ಗೆಲುವಿನ ಹಾದಿ ಸುಲಭವಾಗುತ್ತದೆ.
ಜೆಡಿಯು, ಹಿಂದೂಸ್ತಾನಿ ಅವಾಮ್ ಮೋರ್ಚಾ ಮತ್ತು ಲೋಕಜನಶಕ್ತಿ– ರಾಮ್ ವಿಲಾಸ್ ಬಣ (ಎಲ್ಜೆಪಿ) ಕೂಡ ಮುರ್ಮು ಅವರಿಗೆ ಬೆಂಬಲ ಸೂಚಿಸಿವೆ. ಜೆಡಿಯು 45 ಶಾಸಕರು, 16 ಲೋಕಸಭಾ ಸದಸ್ಯರುಮತ್ತು ಐವರು ರಾಜ್ಯಸಭಾ ಸದಸ್ಯರನ್ನು ಹೊಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.