ಚಂಡೀಗಢ: ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿದ್ದ ಕಾರಿನಿಂದ ಕ್ರಿಕೆಟಿಗ ರಿಷಭ್ ಪಂತ್ ಅವರಿಗೆ ಹೊರಬರಲು ಸಹಾಯ ಮಾಡಿದ ಬಸ್ ಚಾಲಕ ಸುಶೀಲ್ ಕುಮಾರ್ ಹಾಗೂ ನಿರ್ವಾಹಕ ಪರಮ್ಜೀತ್ ಅವರಿಗೆ ಹರಿಯಾಣ ಸಾರಿಗೆ ಸಂಸ್ಥೆ ‘ಹರಿಯಾಣ ರೋಡ್ವೇಸ್‘ ಸನ್ಮಾನ ಮಾಡಿದೆ.
ದೆಹಲಿ–ಡೆಹ್ರಾಡೂನ್ ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ ರಿಷಭ್ ಪಂತ್ ಅವರ ಕಾರು ಅಪಘಾತಕ್ಕೀಡಾಗಿತ್ತು. ಪವಾಡಸದೃಶ ರೀತಿಯಲ್ಲಿ ಪಂತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.
25 ವರ್ಷದ ಪಂತ್ ಚಾಲನೆ ಮಾಡುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರು ಹೆದ್ದಾರಿಯ ವಿಭಜಕಕ್ಕೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡು ಉರಿದಿದೆ. ಬೆಂಕಿ ಆವರಿಸುವ ಮುನ್ನವೇ ಕಾರಿನಿಂದ ಹೊರಬರುವಂತೆ ಮಾಡಲು ಇವರು ಸಹಾಯ ಮಾಡಿದ್ದರು.
ರಾಜ್ಯ ಸರ್ಕಾರ ಕೂಡ ಇವರಿಬ್ಬರಿಗೆ ಸನ್ಮಾನ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಹರಿದ್ವಾರದಿಂದ ಪಾಣಿಪತ್ ನಡುವೆ ಸಂಚರಿಸುವ ಬಸ್ನಲ್ಲಿ ಇವರಿಬ್ಬರು ಕಾರ್ಯನಿರ್ವಹಿಸುತ್ತಿದ್ದರು. ಮುಂಜಾನೆ 4.25ಕ್ಕೆ ಹರಿದ್ವಾರದಿಂದ ಪ್ರಯಾಣ ಆರಂಭಿಸಿದ್ದ ಬಸ್, ಒಂದು ಗಂಟೆ ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿತ್ತು.
ರಿಷಭ್ ಪಂತ್ ಅವರನ್ನು ಹೊರಳೆದ ತಕ್ಷಣವೇ ಕಾರು ಬೆಂಕಿಯ ಉಂಡೆಯಾಯ್ತು ಎಂದು ಇವರಿಬ್ಬರು ಹೇಳಿದ್ದಾಗಿ ಹರಿಯಾಣ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.
‘ಪಾಣಿಪತ್ನಿಂದ ಅವರು ಹಿಂದಿರುಗಿ ಬಂದ ಬಳಿಕ, ಅವರಿಗೆ ಪ್ರಶಂಸಾ ಪತ್ರ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿದೆವು‘ ಎಂದು ಹರಿಯಾಣ ರೋಡ್ವೇಸ್ನ ಪಾಣಿಪತ್ ಡಿಪೋ ಮ್ಯಾನೇಜರ್ ಕುಲ್ದೀಪ್ ಜಂಗ್ರಾ ಅವರು ತಿಳಿಸಿದ್ದಾರೆ.
ಪಂತ್ ಅವರ ಕಾರು ಅಪಘಾತವಾದ ಕೂಡಲೇ ಧಾವಿಸಿ, ಸಹಾಯ ಮಾಡಿದ್ದಾರೆ. ಆ ಮೂಲಕ ಅವರು ಮಾನವೀಯತೆಯ ಉದಾಹರಣೆಯಾಗಿದ್ದಾರೆ ಎಂದು ಜಂಗ್ರಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.