ADVERTISEMENT

ಚಿರಾಗ್ ಪಾಸ್ವಾನ್- ಆರ್‌ಜೆಡಿ ನಾಯಕ ಭೇಟಿ; ಬಿಜೆಪಿ ವಿರೋಧಿ ಮೈತ್ರಿಕೂಟಕ್ಕೆ ಒತ್ತು

ಪಿಟಿಐ
Published 12 ಜುಲೈ 2021, 7:09 IST
Last Updated 12 ಜುಲೈ 2021, 7:09 IST
ಲೋಕ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್
ಲೋಕ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್   

ನವದೆಹಲಿ: ರಾಷ್ಟ್ರೀಯ ಜನತಾ ದಳದ ನಾಯಕ ಶ್ಯಾಮ್ ರಜಾಕ್ ಅವರು ಲೋಕ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್ ಅವರನ್ನು ಭೇಟಿ ಮಾಡಿದ್ದು, ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಮೈತ್ರಿಕೂಟ ಮಾಡಿಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

ಬಿಜೆಪಿಯಿಂದ ತೇಜೋವಧೆಗೊಳಗಾಗಿ ಸದ್ಯ ತಮ್ಮ ರಾಜಕೀಯ ನೆಲೆಯನ್ನು ಕಂಡುಕೊಳ್ಳುವ ತವಕದಲ್ಲಿರುವ ಶ್ಯಾಮ್ ರಜಾಕ್ ಅವರು, ಈ ಬಗ್ಗೆ ಪಾಸ್ವಾನ್ ಅವರು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಮಾತನಾಡಲಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಒಂದು ಕಾಲದಲ್ಲಿ ಜೆಡಿಯು ನಾಯಕ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಪ್ತ ಸಹಾಯಕರಾಗಿದ್ದ ಮತ್ತು ಈಗ ಆರ್‌ಜೆಡಿಯಲ್ಲಿರುವ ರಜಾಕ್ ಅವರು, 'ಪಾಸ್ವಾನ್ ಅವರ ಮನೆಗೆ ಭೇಟಿ ನೀಡಿದ್ದು 'ವೈಯಕ್ತಿಕ'. ಆದರೆ, ರಾಜಕಾರಣಿಗಳು ಭೇಟಿಯಾದಾಗ ರಾಜಕೀಯದ ಮಾತುಕತೆಗಳು ಕೂಡ ನಡೆಯುತ್ತವೆ' ಎಂದು ಹೇಳಿದ್ದಾರೆ.

ADVERTISEMENT

ದಲಿತ ಮತ್ತು ಹಿಂದುಳಿದ ಜಾತಿಗಳ ಹಿತಾಸಕ್ತಿಗಳಿಗಾಗಿ ಬಿಜೆಪಿ ವಿರೋಧಿ ಮೈತ್ರಿ ಕಟ್ಟುವ ಅವಶ್ಯಕತೆಯಿದೆ ಎಂದು ಆರ್‌ಜೆಡಿ ಮುಖಂಡ ಪ್ರತಿಪಾದಿಸಿದ್ದಾರೆ.

ಎಲ್‌ಜೆಪಿಯ ಇತರೆ ನಾಲ್ಕು ಸಂಸದರೊಂದಿಗೆ ಬಿಜೆಪಿಗೆ ಬೆಂಬಲ ಘೋಷಿಸಿದ್ದ ಪಾಸ್ವಾನ್ ಅವರ ಚಿಕ್ಕಪ್ಪ ಪಶುಪತಿ ಕುಮಾರ್ ಪಾರಸ್ ಅವರಿಗೆ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್‌ ದರ್ಜೆಯ ಸ್ಥಾನ ದೊರೆತಿದೆ.

ಆರ್‌ಜೆಡಿ ನಾಯಕರು ಚಿರಾಗ್ ಪಾಸ್ವಾನ್ ಅವರನ್ನು ಬೆಂಬಲಿಸಿ ಮಾತನಾಡುತ್ತಿದ್ದು, ಬಿಹಾರದಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟದೊಂದಿಗೆ ಕೈಜೋಡಿಸುವಂತೆ ಒತ್ತಾಯಿಸುತ್ತಿದ್ದಾರೆ. ಸದ್ಯ ಪಾಸ್ವಾನ್ ಅವರೊಂದಿಗೆ ಯಾವುದೇ ಶಾಸಕರು ಇಲ್ಲದಿದ್ದರೂ ಕೂಡ, ಬಿಜೆಪಿಯೊಂದಿಗಿನ ಸಂಬಂಧವನ್ನು ಕಡಿದುಕೊಂಡು ಪ್ರತಿಪಕ್ಷಗಳ ಬಣಕ್ಕೆ ಸೇರುವ ಪಾಸ್ವಾನ್ ಅವರ ನಿರ್ಧಾರದಿಂದ ವಿಪಕ್ಷಗಳಿಗೆ ಪ್ರಯೋಜನವಾಗಲಿದೆ ಎನ್ನಲಾಗುತ್ತಿದೆ.

ಆದಾಗ್ಯೂ, ತಮ್ಮ ಪಕ್ಷವನ್ನು ಬಲಪಡಿಸುವುದೇ ತಮ್ಮ ಮುಂದಿರುವ ಸದ್ಯದ ಗುರಿ ಎಂದಿರುವ ಪಾಸ್ವಾನ್, ಈ ಉದ್ದೇಶಕ್ಕಾಗಿಯೇ ರಾಜ್ಯದಲ್ಲಿ 'ಆಶಿರ್ವಾದ್ ಯಾತ್ರೆ'ಯನ್ನು ಪ್ರಾರಂಭಿಸಿದ್ದಾರೆ.

ಎಲ್‌ಜೆಪಿಯಲ್ಲಿ ಆರು ಲೋಕಸಭಾ ಸಂಸದರು ಇದ್ದಾರೆ ಮತ್ತು ಅವರಲ್ಲಿ ಐವರು ಪಾರಸ್ ಅವರನ್ನು ಸದನದಲ್ಲಿ ತಮ್ಮ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.