
ಶಬರಿಮಲೆ ದರ್ಶನ
ಪಿಟಿಐ ಚಿತ್ರ (ಸಂಗ್ರಹ ಚಿತ್ರ)
ಪತ್ತಂತಿಟ್ಟ (ಕೇರಳ): ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನಕ್ಕೆ ಸ್ಥಳದಲ್ಲೇ ಬುಕಿಂಗ್ ಮಾಡಲು ದಿನವೊಂದಕ್ಕೆ 5 ಸಾವಿರ ಜನರಿಗಷ್ಟೇ ಅವಕಾಶ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಗುರುವಾರ ಪ್ರಕಟಿಸಿದೆ.
ಕೇರಳ ಹೈಕೋರ್ಟ್ ನಿರ್ದೇಶನದ ಮೇರೆಗ ಸ್ಥಳದಲ್ಲೇ ದರ್ಶನಕ್ಕೆ ಬುಕಿಂಗ್ ಮಾಡುವ ಮಿತಿಯನ್ನು ಕಡಿತಗೊಳಿಸಲಾಗಿದೆ ಎಂದು ಟಿಡಿಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ನೀಲಕ್ಕಲ್ ಮತ್ತು ವಂಡಿಪೆರಿಯಾರ್ ಕೇಂದ್ರಗಳಲ್ಲಿ ಮಾತ್ರ ಸ್ಥಳದಲ್ಲೇ ಬುಕಿಂಗ್ ಲಭ್ಯವಿರುತ್ತದೆ. ಪಂಪಾ, ಎರುಮೇಲಿ ಮತ್ತು ಚೆಂಗನ್ನೂರಿನಲ್ಲಿ ಈ ಸೌಲಭ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನ. 24ರವರೆಗೆ ನಿರ್ಬಂಧ ಜಾರಿಯಲ್ಲಿರುತ್ತದೆ. ಸಾಧ್ಯವಾದಷ್ಟು ಭಕ್ತರು ವರ್ಚುವಲ್ ಕ್ಯೂನಲ್ಲಿ ಬುಕಿಂಗ್ ಮಾಡಿಕೊಳ್ಳಿ ಎಂದು ಟಿಡಿಬಿ ಒತ್ತಾಯಿಸಿದೆ.
ನ.17ರಂದು ದೇಗುಲದ ಬಾಗಿಲು ತೆರೆದ 48 ಗಂಟೆಯೊಳಗೆ ಸುಮಾರು ಎರಡು ಲಕ್ಷ ಯಾತ್ರಿಕರು ಆಗಮಿಸಿದ್ದ ಕಾರಣ ಜನದಟ್ಟಣೆ ಉಂಟಾಗಿತ್ತು. ಈ ಕುರಿತು ಕೇರಳ ಹೈಕೋರ್ಟ್ನ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ಮತ್ತು ಕೆ.ವಿ ಜಯಕುಮಾರ್ ಬುಧವಾರ ದೇವಾಲಯದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.
ಮಂಡಲ– ಮಕರವಿಳಕ್ಕು ಋತುವಿನಲ್ಲಿ ಪ್ರತಿದಿನ ಒಂದು ಲಕ್ಷ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿತ್ತು. ಹೀಗಿದ್ದರೂ, ಈ ಹಿಂದಿನ ಮಾರ್ಗಸೂಚಿಗಳನ್ನು ಏಕೆ ಪಾಲನೆ ಮಾಡಿಲ್ಲ. ಜನದಟ್ಟಣೆಯನ್ನು ನಿಭಾಯಿಸಲು ಏಕೆ ಮುಂಚಿತವಾಗಿ ತಯಾರಿ ನಡೆಸಿಕೊಂಡಿಲ್ಲ’ ಎಂದು ನ್ಯಾಯಾಲಯವು ಟಿಡಿಬಿ ಪ್ರಶ್ನಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.