ADVERTISEMENT

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ತಡೆ ಪ್ರಕರಣ: 200 ಮಂದಿ ವಿರುದ್ಧ ಕೇಸು ದಾಖಲು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 11:09 IST
Last Updated 24 ಡಿಸೆಂಬರ್ 2018, 11:09 IST
ಶಬರಿಮಲೆ ಪ್ರವೇಶಿಸಲು ಯತ್ನಿಸಿದ ಮನಿತಿ ಸಂಘಟನೆಯ ಸದಸ್ಯರು ( ಕೃಪೆ: ಟ್ವಿಟರ್)
ಶಬರಿಮಲೆ ಪ್ರವೇಶಿಸಲು ಯತ್ನಿಸಿದ ಮನಿತಿ ಸಂಘಟನೆಯ ಸದಸ್ಯರು ( ಕೃಪೆ: ಟ್ವಿಟರ್)   

ಪತ್ತನಂತಿಟ್ಟ: ಶಬರಿಮಲೆಅಯ್ಯಪ್ಪ ದರ್ಶನಕ್ಕಾಗಿ ಆಗಮಿಸಿದಮಹಿಳೆಯರಿಗೆ ತಡೆಯೊಡ್ಡಿದ ಪ್ರಕರಣದಲ್ಲಿ 200ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.ಮರಕ್ಕೂಟದಲ್ಲಿ ಮಹಿಳೆಯರನ್ನು ತಡೆದ 100 ಮಂದಿ ವಿರುದ್ಧ ಮತ್ತು ಸನ್ನಿಧಾನದಲ್ಲಿ ನಾಮಜಪ ಮಾಡಿದ 50 ಮಂದಿ ವಿರುದ್ಧ ಸನ್ನಿಧಾನದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಅದೇ ವೇಳೆ ಅಪ್ಪಾಚ್ಚಿಮೇಟ್ಟುನಲ್ಲಿ ತಡೆಯೊಡ್ಡಿದ 40 ಮಂದಿ ವಿರುದ್ಧ ಪಂಪಾ ಪೊಲೀಸರು ಕೇಸು ದಾಖಲಿಸಿದ್ದಾರೆ.

ಸನ್ನಿಧಾನದಲ್ಲಿ ನಿಷೇಧಾಜ್ಞೆ ಇದ್ದರೂ ಅಲ್ಲಿ ನಾಮಜಪ ಪ್ರತಿಭಟನೆ ಕೈಗೊಂಡವರ ವಿರುದ್ಧ ಮತ್ತು ಮರಕ್ಕೂಟ್ಟದಲ್ಲಿ ಪ್ರತಿಭಟನೆ ನಡೆಸಿದವರ ವಿರುದ್ಧ ಸನ್ನಿಧಾನ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಂಡರೆ ಗುರುತು ಪತ್ತೆ ಹಚ್ಚಬಹುದಾದ 150 ಮಂದಿ ವಿರುದ್ಧ ಈ ಕೇಸು ದಾಖಲಾಗಿದೆ. ಹೆಚ್ಚಿನ ತನಿಖೆ ನಂತರವೇ ಇವರ ವಿವರಗಳನ್ನು ಹೇಳಲಾಗುವುದು ಎಂದಿದ್ದಾರೆ ಪೊಲೀಸರು.

ADVERTISEMENT

ಕೋಯಿಕ್ಕೋಡ್ ಕೊಯಿಲಾಂಡಿ ನಿವಾಸಿ ಬಿಂದು, ಮಲಪ್ಪುರಂ ನಿವಾಸಿ ಕನಕ ದುರ್ಗಾ ಎಂಬವರು ಬೆಳಗ್ಗೆ 7 ಗಂಟೆ ಹೊತ್ತಿಗೆ ಶಬರಿಮಲೆಗೆ ತಲುಪಿದ್ದರು.ಇವರು ಮಲೆ ಹತ್ತಲು ಆರಂಭಿಸಿ ಅರ್ಧ ಗಂಟೆಯಾದಾಗ ಅಲ್ಲಿ ಪ್ರತಿಭಟನೆ ಶುರುವಾಗಿತ್ತು.ಆಮೇಲೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸಂಘರ್ಷವೇರ್ಪಟ್ಟಿದೆ. ಪ್ರತಿಭಟನಾಕಾರರನ್ನು ಪೊಲೀಸರು ಅಲ್ಲಿಂದ ತೆರವುಗೊಳಿಸಿದ್ದರೂ, ಪ್ರತಿಭಟನೆ ತೀವ್ರವಾದಾಗ ಶಬರಿಮಲೆ ಏರಲು ಬಂದ ಮಹಿಳೆಯರನ್ನು ಪೊಲೀಸರು ವಾಪಸ್ ಕಳುಹಿಸಿದ್ದರು.

ಮನಿತಿ ವಿರುದ್ಧ ಬಿಜೆಪಿ ಪ್ರತಿಭಟನೆ
ತಿರುವನಂತಪುರಂ: ಶಬರಿಮಲೆ ಪ್ರವೇಶಿಸಲು ಯತ್ನಿಸಿದ ಮನಿತಿ ಸಂಘಟನೆಯ ಮೂವರು ಸದಸ್ಯರ ವಿರುದ್ಧ ತಿರುವನಂತಪುರಂ ರೈಲ್ವೆ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಭಾನುವಾರ ಶಬರಿಮಲೆಯಲ್ಲಿ ಅಯ್ಯಪ್ಪ ದರ್ಶನಕ್ಕೆ ಯತ್ನಿಸಿದ್ದ ಮನಿತಿ ಸಂಘಟನೆಯ 11 ಸದಸ್ಯರೊಂದಿಗೆ ಸೇರಲು ಮೂವರು ಮಹಿಳೆಯರು ಆಗಮಿಸಿದ್ದರು.ಭಾನುವಾರ ಪತ್ತನಂತ್ತಿಟ್ಟಕ್ಕೆ ಬಂದಿಳಿದಿದ್ದ ಈ ಮಹಿಳೆಯರು ಇಂದು ತಿರುವನಂತಪುರಂನಿಂದ ಚೆನ್ನೈಗೆ ವಾಪಸ್ ಆಗುತ್ತಿದ್ದ ವೇಳೆ ಬಿಜೆಪಿ ಪ್ರತಿಭಟನೆ ನಡೆಸಿದೆ.
ಪ್ರತಿಭಟನಾಕಾರರಿಂದ ಈ ಮಹಿಳೆಯರಿಗೆ ರಕ್ಷಣೆ ನೀಡುವಸಲುವಾಗಿ ಇವರನ್ನು ವಿಕಲಾಂಗರಿಗೆ ಮೀಸಲಿಟ್ಟ ಬೋಗಿಯಲ್ಲಿ ಸೀಟು ನೀಡಲಾಗಿತ್ತು.ಇದನ್ನು ಪ್ರಶ್ನಿಸಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎಸ್. ಸುರೇಶ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು.ಈ ಬೋಗಿಯ ಕಿಟಕಿ ಬಾಗಿಲುಗಳನ್ನು ಪೊಲೀಸರು ಮುಚ್ಚಿದ್ದರು.
ರೈಲ್ವೆ ಸಿಬ್ಬಂದಿ ಜತೆ ಪ್ರತಿಭಟನಾಕಾರರು ವಾಗ್ವಾದ ಮಾಡಿ ರೈಲಿಗೆ ಹತ್ತುವ ಯತ್ನವನ್ನೂ ಮಾಡಿದ್ದರು.ಇನ್ನು ಕೆಲವು ಬಿಜೆಪಿ ಕಾರ್ಯಕರ್ತರು ರೈಲಿನ ಮುಂದೆ ನಿಂತು ಪ್ರತಿಭಟಿಸಲು ಯತ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.