
ನವದೆಹಲಿ: ‘ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ದಾಳಿ ನಡೆಸುತ್ತಿರುವ ಈ ವೇಳೆಯಲ್ಲಿ, ಕೊಲ್ಲಿ ರಾಷ್ಟ್ರಗಳಲ್ಲಿ ನೆಲಸಿರುವ ಕೋಟಿ ಭಾರತೀಯರ ಸುರಕ್ಷತೆಯೇ ನಮ್ಮ ಪರಮ ಆದ್ಯತೆ’ ಎಂದು ಭಾರತ ಮಂಗಳವಾರ ಹೇಳಿದೆ.
ಈ ಸಂಘರ್ಷ ಆರಂಭಗೊಂಡ ನಂತರ ಎರಡನೇ ಹೇಳಿಕೆ ಬಿಡುಗಡೆ ಮಾಡಿರುವ ಭಾರತ, ‘ಪಶ್ಚಿಮ ಏಷ್ಯಾದಲ್ಲಿನ ಈ ಬೆಳವಣಿಗೆಗಳಿಂದ ಇಂಧನ ಪೂರೈಕೆಯಲ್ಲಿಯೂ ವ್ಯತ್ಯಯವಾಗುವ ಸಾಧ್ಯತೆ ಇದೆ. ಇದು ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ’ ಎಂದು ಕಳವಳ ವ್ಯಕ್ತಪಡಿಸಿದೆ.
‘ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂಘರ್ಷವನ್ನು ಶೀಘ್ರವೇ ಶಮನಗೊಳಿಸಲು ಮುಂದಾಗಬೇಕು’ ಎಂದೂ ಭಾರತ ಒತ್ತಾಯಿಸಿದೆ.
‘ಭಾರತವು ಪಶ್ಚಿಮ ಏಷ್ಯಾದ ನೆರೆ ರಾಷ್ಟ್ರ. ಈ ಪ್ರದೇಶದಲ್ಲಿನ ಸುರಕ್ಷತೆ ಹಾಗೂ ಸ್ಥಿರತೆಯು ಭಾರತದ ಪಾಲಿಗೆ ನಿರ್ಣಾಯಕವಾಗಿದೆ. ಆದರೆ, ಈಗಿನ ಬೆಳವಣಿಗೆಗಳು ಆತಂಕ ಹೆಚ್ಚಿಸಿವೆ’ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತರಾಗಿರುವ ಕುರಿತು ಸಚಿವಾಲಯ ತನ್ನ ಹೇಳಿಕೆಯಲ್ಲಿ ಉಲ್ಲೇಖ ಮಾಡಿಲ್ಲ.
‘ವಿಶ್ವದ ಹಲವೆಡೆ ಭಾರತೀಯರು ಉದ್ಯೋಗದಲ್ಲಿದ್ದಾರೆ. ಸರಕು ಸಾಗಣೆ ನೌಕೆಗಳಲ್ಲಿಯೂ ಭಾರತೀಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ನೌಕೆಗಳ ಮೇಲೆ ನಡೆದ ದಾಳಿಗಳಿಂದಾಗಿ ಕೆಲ ಭಾರತೀಯರು ಮೃತಪಟ್ಟಿದ್ದಾರೆ ಇಲ್ಲವೇ ನಾಪತ್ತೆಯಾಗಿದ್ದಾರೆ. ಹೀಗಾಗಿ, ಸರಕು ಸಾಗಿಸುವ ಹಡಗುಗಳ ಮೇಲೆ ದಾಳಿ ನಡೆಸುವುದನ್ನು ಭಾರತ ವಿರೋಧಿಸುತ್ತದೆ’ ಎಂದು ಸಚಿವಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.