ಮುಂಬೈ:ಸಮೀರ್ ವಾಂಖೆಡೆ ಅವರ ಜನನ ಪ್ರಮಾಣ ಪತ್ರವೊಂದನ್ನು ಟ್ವೀಟ್ ಮಾಡಿರುವ ಸಚಿವ ನವಾಬ್ ಮಲಿಕ್ ಅವರು, ‘ಎಲ್ಲಾ ಮೋಸ ಇಲ್ಲಿಂದಲೇ ಆರಂಭವಾಗಿದೆ’ ಎಂದು ಆರೋಪಿಸಿದ್ದಾರೆ.
‘ಜನನ ಪ್ರಮಾಣ ಪತ್ರದಲ್ಲಿ ಸಮೀರ್ ವಾಂಖೆಡೆ ಅವರ ಹೆಸರು, ಸಮೀರ್ ದಾವೂದ್ ವಾಂಖೆಡೆ ಎಂದು ಇದೆ. ಮುಸ್ಲಿಮರಾದ ಸಮೀರ್ ದಾವೂದ್ ವಾಂಖೆಡೆ, ಮೀಸಲಾತಿ ಪಡೆಯುವ ಉದ್ದೇಶದಿಂದ ತಾವು ಹಿಂದೂ ಪರಿಶಿಷ್ಟ ಜಾತಿಗೆ ಸೇರಿದವರು ಎಂದು ಜಾತಿ ಪ್ರಮಾಣ ಪತ್ರ ಸೃಷ್ಟಿಸಿದ್ದಾರೆ. ಈ ಮೂಲಕ ಮೀಸಲಾತಿ ಅಡಿಯಲ್ಲಿ ಕೆಲಸಕ್ಕೆ ಸೇರಿದ್ದಾರೆ’ ಎಂದು ಮಲಿಕ್ ಟ್ವೀಟ್ ಮಾಡಿದ್ದಾರೆ.
ಜತೆಗೆ ಸಮೀರ್ ಅವರ ಮೊದಲ ಪತ್ನಿ ಡಾ.ಶಬಾನಾ ಕುರೇಶಿ ಅವರ ಜತೆ ಸಮೀರ್ ಅವರ ಚಿತ್ರವನ್ನು ನವಾಬ್ ಮಲಿಕ್ ಟ್ವೀಟ್ ಮಾಡಿದ್ದಾರೆ.
ಮಲಿಕ್ ಅವರ ಆರೋಪಗಳನ್ನು ಸಮೀರ್ ಅಲ್ಲಗಳೆದಿದ್ದಾರೆ. ‘ನಾನು ಭಾರತದ ನಿಜವಾದ ಸಂಸ್ಕೃತಿಯನ್ನು ಬಿಂಬಿಸುವ ಬಹುಧರ್ಮದ, ಜಾತ್ಯತೀತ ಕುಟುಂಬಕ್ಕೆ ಸೇರಿದವನು. ನನ್ನ ತಂದೆ ದಯಾನ್ದೇವ್ ಕಚೂರ್ಜಿ ವಾಂಖೆಡೆ ಅವರು ರಾಜ್ಯ ಅಬಕಾರಿ ಇಲಾಖೆಯಲ್ಲಿ ಹಿರಿಯ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದಾರೆ. ನನ್ನ ತಂದೆಯ ಪತ್ನಿ ಮತ್ತು ನನ್ನ ತಾಯಿ ಝಹೀದಾ ಅವರು ಮುಸ್ಲಿಂ. ನಾನು ಹುಟ್ಟಾ ಹಿಂದೂ’ ಎಂದು ಸಮೀರ್ ವಿವರಣೆ ನೀಡಿದ್ದಾರೆ.
‘ನಾನು ಮೊದಲು ಮದುವೆಯಾದದ್ದು ಡಾ.ಶಬಾನಾ ಕುರೇಶಿ ಅವರನ್ನು. ಆದರೆ, ನಮ್ಮಿಬ್ಬರಿಗೆ ವಿಚ್ಛೇದನವಾಗಿದೆ. 2017ರಲ್ಲಿ ನಾನು ಕ್ರಾಂತಿ ದೀನನಾತ್ ರೇಡ್ಕರ್ ಅವರನ್ನು ಮದುವೆಯಾಗಿದ್ದೇನೆ. ನಾವಿಬ್ಬರೂ ಹಿಂದೂಗಳು’ ಎಂದು ಸಮೀರ್ ಮಾಹಿತಿ ನೀಡಿದ್ದಾರೆ.
‘ನನ್ನ ವೈಯಕ್ತಿಕ ಜೀವನದ ಮಾಹಿತಿಯನ್ನು ಬಹಿರಂಗಪಡಿಸಿ, ನವಾಬ್ ಮಲಿಕ್ ಅವರು
ಅವಹೇಳನ ಮಾಡುತ್ತಿದ್ದಾರೆ. ಇಂತಹ ದಾಳಿಗಳಿಂದ ನಾನು ನೊಂದಿದ್ದೇನೆ’ ಎಂದು ಅವರು
ಹೇಳಿದ್ದಾರೆ.
‘ನಾನು ದಯಾನ್ದೇವ್... ದಾವೂದ್ ಅಲ್ಲ. ನಾನು ಹಿಂದೂ. ನನ್ನ ದಿವಂಗತ ಪತ್ನಿ ಮುಸ್ಲಿಂ. ನನ್ನ ಮಗ ಅತ್ಯಂತ ಪವಿತ್ರವಾದ ಭಕ್ತಿಯಿಂದ ತಾಯ್ನಾಡಿನ ಸೇವೆ ಸಲ್ಲಿಸುತ್ತಿದ್ದಾನೆ’ ಎಂದು ಸಮೀರ್ ಅವರ ತಂದೆ, ದಯಾನ್ದೇವ್ ವಾಂಖೆಡೆ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.