ನವದೆಹಲಿ: ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿರುವ ರಾಮ ಲಲ್ಲಾ ವಿಗ್ರಹವು ಹೃದಯ ಸ್ಪರ್ಶಿಯಾಗಿದೆ ಹಾಗೂ ಇದು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತದೆ ಎಂದು ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಶ್ಲಾಘಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಮಸ್ಕಾರ ಅರುಣ್ ಯೋಗಿರಾಜ್. ನೀವು ನಿಜವಾಗಿಯೂ ಭಗವಾನ್ ವಿಶ್ವಕರ್ಮರಿಂದ ಆಶೀರ್ವದಿಸಲ್ಪಟ್ಟಿದ್ದೀರಿ. ನೀವು ಕೆತ್ತಿರುವ ಭಗವಾನ್ ರಾಮ ಲಲ್ಲಾ ಶಿಲ್ಪವು ಕಲಾವಿದನಾಗಿ ನನಗೆ ಹೃದಯಸ್ಪರ್ಶಿಯಾಗಿದೆ. ಪ್ರಭು ಶ್ರೀ ರಾಮ ಅವರ ಆಶೀರ್ವಾದ ಯಾವಾಗಲೂ ನಿಮ್ಮ ಮೇಲಿರಲಿ. ಜೈ ಶ್ರೀ ರಾಮ್' ಎಂದು ಪಟ್ನಾಯಕ್ ಹೇಳಿದ್ದಾರೆ.
ಪಟ್ನಾಯಕ್ ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿದ ಯೋಗಿರಾಜ್, 'ನಿಮ್ಮ ಪ್ರಶಂಸೆ ಕಲಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ಪ್ರೇರೇಪಿಸುತ್ತದೆ' ಎಂದಿದ್ದಾರೆ.
‘ಪ್ರಪಂಚದ ಹೆಸರಾಂತ ಮರಳು ಕಲಾವಿದರಿಂದ ಮೆಚ್ಚುಗೆ ಪಡೆದಿರುವುದು ನನ್ನ ಅದೃಷ್ಟ. ಖಂಡಿತವಾಗಿಯೂ ಇದು ಕಲಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ನನ್ನನ್ನು ಪ್ರೇರೇಪಿಸುತ್ತದೆ' ಎಂದು ಯೋಗಿರಾಜ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.