ನವದೆಹಲಿ (ಪಿಟಿಐ): ಆರ್ಎಸ್ಎಸ್ ರ್ಯಾಲಿಗೆ ಅನುಮತಿ ನೀಡಿ ಆದೇಶಿಸಿದ್ದ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಸೋಮವಾರ ಕಾಯ್ದಿರಿಸಿದೆ.
ಮೆರವಣಿಗೆಗಳನ್ನು ನಡೆಸಲು ಸಾಧ್ಯವಿಲ್ಲ, ಹಾಗೆಂದ ಮಾತ್ರಕ್ಕೆ ಸಂಪೂರ್ಣವಾಗಿ ನಿಷೇಧಿಸಲೂ ಸಾಧ್ಯವಿಲ್ಲ ಎಂದು ಸರ್ಕಾರದ ಪರ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದ ಬಳಿಕ ನ್ಯಾಯಮೂರ್ತಿ ವಿ. ರಾಮಸುಬ್ರಮಣಿಯನ್ ಮತ್ತು ಪಂಕಜ್ ಮಿಥಾಲ್ ಅವರಿದ್ದ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿದೆ.
ವಿಚಾರಣೆ ವೇಳೆ ಅವರು, ಸಂಘಟನೆಗೆ ಬೇಕಾದ ಕಡೆ ಮೆರವಣಿಗೆಯನ್ನು ನಡೆಸುವ ಹಕ್ಕಿದೆಯೆ? ರಾಜ್ಯ ಸರ್ಕಾರ ನಿರ್ದಿಷ್ಟ ಮಾರ್ಗದಲ್ಲಿ ರ್ಯಾಲಿಗಳನ್ನು ನಡೆಸಲು ಆರ್ಎಸ್ಎಸ್ಗೆ ಅವಕಾಶ ನೀಡಿದೆ. ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವುದನ್ನು ಗಮನದಲ್ಲಿಟ್ಟುಕೊಂಡು ಒಳಾಂಗಣದಲ್ಲಿ ಮೆರವಣಿಗೆ ನಡೆಸಲು ಅವಕಾಶ ನೀಡಲಾಗಿದೆ ಎಂದರು.
ಆರ್ಎಸ್ಎಸ್ ಪರ ಹಿರಿಯ ವಕೀಲ ಮಹೇಶ್ ಜೆಠ್ಮಲಾನಿ ಅವರು, ಬಲವಾದ ಕಾರಣವಿಲ್ಲದೆ ಜನರು ಯಾವುದೇ ಶಸ್ತ್ರಾಸ್ತ್ರವಿಲ್ಲದೆ ಗುಂಪು ಸೇರುವುದನ್ನು ಸಂವಿಧಾನ ವಿಧಿ 19 (1)(ಬಿ) ಅಡಿಯಲ್ಲಿ ಹತ್ತಿಕ್ಕಲಾಗದು ಎಂದು ವಾದ ಮಂಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.