ADVERTISEMENT

ಅಯೋಧ್ಯೆ ಕೇಸರಿಮಯ; ಮುಸ್ಲಿಂ ಸಮುದಾಯದಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2018, 4:21 IST
Last Updated 25 ನವೆಂಬರ್ 2018, 4:21 IST
ಕೃಪೆ: ಎಎನ್‍ಐ
ಕೃಪೆ: ಎಎನ್‍ಐ   

ಅಯೋಧ್ಯೆ: ವಿಶ್ವ ಹಿಂದೂ ಪರಿಷತ್ ಆಯೋಜಿಸಿರುವ ಧರ್ಮ ಸಭೆಯಲ್ಲಿ ಭಾಗವಹಿಸಲು ಲಕ್ಷಾಂತರ ಮಂದಿ ಅಯೋಧ್ಯೆಗೆ ಬಂದಿಳಿದಿದ್ದಾರೆ. ವಿಶ್ವ ಹಿಂದೂ ಪರಿಷತ್ ಮತ್ತು ಶಿವಸೇನಾ ಕಾರ್ಯಕರ್ತರು ಭಾನುವಾರ ಅಯೋಧ್ಯೆಯಲ್ಲಿ ರ‍್ಯಾಲಿ ನಡೆಸಲಿದ್ದು, ಅಯೋಧ್ಯೆ ಕೇಸರಿಮಯವಾಗಿದೆ.ಈ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದೆ.

1992ರಲ್ಲಿ ಇದೇ ರೀತಿ ಇಲ್ಲಿ ಸೇರಿದ್ದ ಕರ ಸೇವಕರು ಮತ್ತು ರಾಮಭಕ್ತರ ಗುಂಪು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿತ್ತು. ಆನಂತರ ಅಯೋಧ್ಯೆಯಲ್ಲಿ ಭಾರಿ ಹಿಂಸಾಚಾರ ನಡೆದಿತ್ತು. ಹೀಗಾಗಿ ಈಗಲೂ ಅಯೋಧ್ಯೆಯಲ್ಲಿನ ಶಾಂತಿ ಕದಡಬಹುದು ಎಂದು ಸ್ಥಳೀಯ ಮುಸ್ಲಿಮರು ಆತಂಕ ವ್ಯಕ್ತಪಡಿಸಿದ್ದಾರೆ.

ರಾಮ ಜನ್ಮಭೂಮಿಯ ಬಳಿ ಇರುವ ಆಲಂಭಾಗ್ ಕಾತ್ರಾದಲ್ಲಿ ಹಲವಾರು ಮುಸ್ಲಿಂ ಕುಟುಂಬಗಳು ವಾಸಿಸುತ್ತಿದ್ದು, ಆತಂಕಗೊಂಡ ಈ ಕುಟುಂಬಗಳು ಸುರಕ್ಷಿತ ಸ್ಥಳಕ್ಕೆ ಹೋಗಿದ್ದಾರೆ.

ADVERTISEMENT

ವಿಶ್ವ ಹಿಂದೂ ಪರಿಷತ್ ಕಾಲ್ನಡಿಗೆಜಾಥಾ ಮತ್ತು ಮೊಟಾರ್ ಸೈಕಲ್ ರ‍್ಯಾಲಿ ಹಮ್ಮಿಕೊಂಡಿದ್ದು ಇದು ಮುಸ್ಲಿಂ ಸಮುದಾಯದವರ ಪ್ರದೇಶಗಳ ಮೂಲಕ ಹಾದು ಹೋಗಲಿದೆ.ಈ ರೀತಿ ರ‍್ಯಾಲಿ ಹಾದು ಹೋಗುವಾಗ ಕಾರ್ಯಕರ್ತರು ಪ್ರಚೋದನಾಕಾರಿ ಘೋಷಣೆ ಕೂಗಿದರೆ ಇತರ ಸಮುದಾಯದವರು ಅದಕ್ಕೆ ಪ್ರತಿಕ್ರಿಯಿಸುವ ಸಾಧ್ಯತೆ ಇದೆ ಎಂದು ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.
ಗೊಂಡಾ, ಬರಬಂಕಿ, ಬಸ್ತಿ, ಸುಲ್ತಾನ್‍ಪುರ್, ಅಂಬೇಡ್ಕರ್ ನಗರ, ರಾಯ್ ಬರೇಲಿ ಜಿಲ್ಲೆಯಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೆ.

ಶಾಂತಿಯುತವಾಗಿ ರ‍್ಯಾಲಿ ನಡೆಸಲು ನಾವು ಉದ್ದೇಶಿಸಿದ್ದು, ಯಾವುದೇ ರೀತಿಯ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಬಾರದು ಎಂದು ನಾವು ಕಾರ್ಯಕರ್ತರಿಗೆ ನಿರ್ದೇಶಿಸಿದ್ದೇವೆ ಎಂದು ವಿಎಚ್‍ಪಿ ಅವಧ್ ಘಟಕ ನಾಯಕ ಹರಿ ಅಗರವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.