ADVERTISEMENT

ಸುದ್ದಿ, ಜಾಹೀರಾತುಗಳಲ್ಲಿ ಮಹಿಳಾ ಘನತೆ, ಸುರಕ್ಷತೆಯ ನಿರೀಕ್ಷೆ: ದ್ರೌಪದಿ ಮುರ್ಮು

ಪಿಟಿಐ
Published 12 ಮಾರ್ಚ್ 2023, 12:41 IST
Last Updated 12 ಮಾರ್ಚ್ 2023, 12:41 IST
ದ್ರೌಪದಿ ಮುರ್ಮು
ದ್ರೌಪದಿ ಮುರ್ಮು   

ನವದೆಹಲಿ: ‘ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿ, ಜಾಹೀರಾತು ಮತ್ತು ಕಾರ್ಯಕ್ರಮಗಳಲ್ಲಿ ಮಹಿಳೆಯರ ಘನತೆ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಸಂಪೂರ್ಣ ಸೂಕ್ಷ್ಮತೆಯನ್ನು ನಿರೀಕ್ಷಿಸಲಾಗುತ್ತದೆ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ ಹೇಳಿದ್ದಾರೆ.

ನವಭಾರತ್ ಟೈಮ್ಸ್ ಆಯೋಜಿಸಿದ್ದ ಆಲ್ ವುಮೆನ್ ಬೈಕ್ ರ‍್ಯಾಲಿಗೆ ವಿಡಿಯೊ ಸಂದೇಶದ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ‘ಸಂವಿಧಾನದ ಪ್ರಕಾರ, ಮಹಿಳೆಯರ ಘನತೆಗೆ ಕುಂದುಂಟು ಮಾಡುವಂಥ ಆಚರಣೆಗಳನ್ನು ಕೈಬಿಡುವುದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ’ ಎಂದರು.

‘ಈ ಮೂಲಭೂತ ಕರ್ತವ್ಯವನ್ನು ನಿರ್ವಹಿಸಲು ಪ್ರತಿಯೊಬ್ಬ ನಾಗರಿಕನ ಚಿಂತನೆಯು ಮಹಿಳೆಯರ ಬಗ್ಗೆ ಗೌರವಯುತವಾಗಿರುವುದು ಅವಶ್ಯಕವಾಗಿದೆ. ಮಹಿಳೆಯರ ಬಗ್ಗೆ ಗೌರವಯುತ ನಡವಳಿಕೆಯ ಅಡಿಪಾಯವನ್ನು ಕುಟುಂಬದಲ್ಲಿಯೇ ಹಾಕಬೇಕು’ ಎಂದೂ ಅವರು ಹೇಳಿದ್ದಾರೆ. ‌

ADVERTISEMENT

‘ತಾಯಂದಿರು, ಸಹೋದರಿಯರು ಮತ್ತು ತಮ್ಮ ಗಂಡು ಮಕ್ಕಳು ಹಾಗೂ ಸಹೋದರರಲ್ಲಿ ಮಹಿಳೆಯರನ್ನು ಗೌರವಿಸುವಂಥ ಮೌಲ್ಯವನ್ನು ಬೆಳೆಸಬೇಕು. ಅಷ್ಟೇ ಅಲ್ಲ, ಶಾಲಾ–ಕಾಲೇಜುಗಳಲ್ಲಿ ಶಿಕ್ಷಕರು, ಮಹಿಳೆಯರನ್ನು ಗೌರವಿಸುವ ಹಾಗೂ ಸಂವೇದಾನಶೀಲತೆಯ ಸಂಸ್ಕೃತಿಯನ್ನು ವಿದ್ಯಾರ್ಥಿಗಳಲ್ಲಿ ಬಲಪಡಿಸಬೇಕು’ ಎಂದು ಮುರ್ಮು ಅವರು ಸಲಹೆ ನೀಡಿದ್ದಾರೆ.

‘ಪ್ರಕೃತಿಯು ಮಹಿಳೆಯರಿಗೆ ತಾಯಂದಿರಾಗುವ ಸಾಮರ್ಥ್ಯವನ್ನು ನೀಡಿದೆ. ತಾಯ್ತನದ ಸಾಮರ್ಥ್ಯವನ್ನು ಹೊಂದಿರುವವರಲ್ಲಿ ಸಹಜವಾಗಿಯೇ ನಾಯಕತ್ವದ ಸಾಮರ್ಥ್ಯವೂ ಇರುತ್ತದೆ. ಎಲ್ಲ ಮಿತಿ ಮತ್ತು ಸವಾಲುಗಳ ನಡುವೆಯೂ ಮಹಿಳೆಯರು ತಮ್ಮ ಅದಮ್ಯ ಧೈರ್ಯ ಮತ್ತು ಕೌಶಲದ ಬಲದಿಂದ ಯಶಸ್ಸಿನ ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.