ADVERTISEMENT

200 ಪಂಚತಾರ ಹೋಟೆಲ್‌ಗಳಲ್ಲಿ ಬಿಲ್‌ ಪಾವತಿಸದೆ ವಂಚಿಸುತ್ತಿದ್ದವನ ಬಂಧನ

ಐಎಎನ್ಎಸ್
Published 26 ಡಿಸೆಂಬರ್ 2022, 2:45 IST
Last Updated 26 ಡಿಸೆಂಬರ್ 2022, 2:45 IST
   

ತಿರುವನಂತಪುರಂ:ಪಂಚತಾರ ಹೋಟೆಲ್‌ಗಳ ಕೋಣೆ, ಆಹಾರದ ಬಿಲ್‌ ಪಾವತಿಸದೆ ವಂಚಿಸಿ ಪರಾರಿಯಾಗುತ್ತಿದ್ದವನನ್ನು ಕೇರಳದ ಕೊಲ್ಲಂ ಪೊಲೀಸರು ಬಂಧಿಸಿದ್ದಾರೆ.

ತಮಿಳು ನಾಡಿನ ವಿನ್ಸೆಂಟ್ ಜಾನ್‌(63) ಬಂಧಿತ ಆರೋಪಿ. ಪಂಚತಾರ ಹೋಟೆಲ್‌ಗಳಲ್ಲಿ ತಂಗುತ್ತಿದ್ದ ಈತ, ಕೋಣೆ, ಆಹಾರದ ಬಿಲ್‌ ಪಾವತಿಸುತ್ತಿರಲಿಲ್ಲ. ಹೋಟೆಲ್‌ನ ಲ್ಯಾಪ್‌ಟಾಪ್‌ ಕಳ್ಳತನ ಮಾಡಿ ಪರಾರಿಯಾಗಿದ್ದ. ಈತನ ವಿರುದ್ಧ ಕೊಲ್ಲಂನ ಹೋಟೆಲ್ಲೊಂದು ದೂರು ದಾಖಲಿಸಿತ್ತು.

ಇಂಗ್ಲಿಷ್‌ನಲ್ಲಿ ಅತ್ಯುತ್ತಮವಾಗಿ ಮಾತನಾಡುತ್ತಿದ್ದ ಈತ ಮುಂಗಡ ಪಾವತಿಸದೆ ಕೋಣೆ ಪಡೆದಿದ್ದ. ದುಬಾರಿ ಮದ್ಯ, ಆಹಾರಗಳನ್ನು ಆರ್ಡರ್‌ ಮಾಡಿ ತರಿಸಿಕೊಂಡಿದ್ದ. ಬಳಿಕ ಕಾರ್ಯಕ್ರಮದ ನೆಪ ಹೇಳಿ ಹೊಟೇಲ್‌ನಿಂದಲೇ ಲ್ಯಾಪ್‌ಟಾಪ್‌ ಎರವಲು ಪಡೆದುಕೊಂಡು ಪರಾರಿಯಾಗಿದ್ದ. ಕೆಲ ಗಂಟೆಗಳ ಬಳಿಕ ತಾವು ಮೋಸ ಹೋಗಿರುವುದು ಹೋಟೆಲ್‌ ಸಿಬ್ಬಂದಿ ಅರಿವಿವಾಗಿದೆ. ತಕ್ಷಣ ದೂರು ದಾಖಲಿಸಿದ್ದಾರೆ.

ADVERTISEMENT

ಆತನ ಮೊಬೈಲ್‌ ಸಿಗ್ನಲ್‌ ಜಾಡು ಹಿಡಿದ ಪೊಲೀಸರು ಕೊಲ್ಲಂ ರೈಲ್ವೆ ನಿಲ್ದಾಣದಲ್ಲಿ ಆತನನ್ನು ಬಂಧಿಸಿದ್ದಾರೆ. 2019ರಲ್ಲಿಯೂ ಈತ ಇದೇ ರೀತಿ ಮತ್ತೊಂದು ಹೋಟೆಲ್‌ಗೆ ವಂಚಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮಾಹಿತಿ ಪ್ರಕಾರ ಈತನ ವಿರುದ್ಧ ದೇಶದಾದ್ಯಂತ ಇದೇ ರೀತಿ 200ಕ್ಕೂ ಅಧಿಕ ವಂಚನೆ ಪ್ರಕರಣಗಳಿವೆ. ಬಹುತೇಕ ಪ್ರಕರಣಗಳು ಮುಂಬೈನಲ್ಲಿ ದಾಖಲಾಗಿವೆ.

ತಿರುವನಂತಪುರಂ ಪೊಲೀಸ್‌ ಠಾಣೆಗೆ ಕರೆತಂದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ‘ಪಂಚತಾರಾ ಹೋಟೆಲ್‌ಗಳು ಬೆಟ್ಟಿಂಗ್ ಸಿಂಡಿಕೇಟ್‌ಗಳು ಸೇರಿದಂತೆ ಗರಿಷ್ಠ ಅನೈತಿಕ ಕಾರ್ಯಾಚರಣೆಗಳು ನಡೆಯುವ ಸ್ಥಳಗಳಾಗಿವೆ. ಅವರಿಗೆ ಪಾಠ ಕಲಿಸಲು ತಾನು ಹೀಗೆ ಮಾಡುತ್ತಿರುವೆ’ ಎಂದಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.