ಜಲಾನ್: ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿರುವ ಬೆನ್ನಲ್ಲೇ ಹಲವು ಕಡೆ ಪಕ್ಷಿಗಳು ಸಾವಿಗೀಡಾಗುತ್ತಿರುವುದು ಮುಂದುವರಿಯುತ್ತಲೇ ಇದೆ. ಉತ್ತರ ಪ್ರದೇಶದ ಜಲಾನ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಐದು ನವಿಲುಗಳು, ನಾಲ್ಕು ಪಾರಿವಾಳಗಳು ಮತ್ತು ನಾಲ್ಕು ಕಾಗೆಗಳ ಮೃತ ದೇಹಗಳು ಪತ್ತೆಯಾಗಿದ್ದು,ಅವುಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಆತಾ ಪೊಲೀಸ್ ಠಾಣೆ ವ್ಯಾಪ್ತಿಯ ಸ್ಯಾಂಡಿ ಗ್ರಾಮದ ಕರಣ್ ಸಿಂಗ್ ಅವರ ತೋಟದಲ್ಲಿ ಭಾನುವಾರ ರಾತ್ರಿ ಪಕ್ಷಿಗಳು ಶವವಾಗಿ ಪತ್ತೆಯಾಗಿವೆ ಮತ್ತು ಗ್ರಾಮಸ್ಥರು ಅವುಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಜಲಾನ್ ಪಶುವೈದ್ಯ ಅಧಿಕಾರಿ ಡಾ.ರವೀಂದ್ರ ಕುಮಾರ್ ತಿಳಿಸಿದ್ದಾರೆ.
ವ್ಯಾಪಿಸುತ್ತಿರುವ ಹಕ್ಕಿಜ್ವರ ಕುರಿತು ಶಂಕೆ ವ್ಯಕ್ತಪಡಿಸಿದ ಗ್ರಾಮಸ್ಥರು ಸೋಮವಾರ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ನಂತರ ಪಶುವೈದ್ಯರ ತಂಡವನ್ನು ಗ್ರಾಮಕ್ಕೆ ಕರೆದೊಯ್ಯಲಾಯಿತು ಮತ್ತು ಪಕ್ಷಿಗಳ ಮೃತ ದೇಹಗಳನ್ನು ಸಂಗ್ರಹಿಸಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಪಕ್ಷಿಗಳು ಶೀತದಿಂದಾಗಿ ಮೃತಪಟ್ಟಿವೆ, ಆದರೆ ಆ ಪ್ರದೇಶದಲ್ಲಿ ಹಕ್ಕಿ ಜ್ವರದ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಅವುಗಳ ದೇಹಗಳನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ. ಮೃತ ಪಕ್ಷಿಗಳನ್ನು ಮುಟ್ಟಬಾರದು ಮತ್ತು ತಮ್ಮ ಪ್ರದೇಶದಲ್ಲಿ ಯಾವುದೇ ಪಕ್ಷಿ ಸತ್ತರೆ ಅವುಗಳನ್ನು ಹೂಳಬಾರದು ಎಂದು ಗ್ರಾಮಸ್ಥರಿಗೆ ತಿಳಿಸಲಾಗಿದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.