ಅಯೋಧ್ಯಾ : ರಾಮನ ವಿಗ್ರಹಗಳನ್ನು ನಿರ್ಮಿಸುವ ಸಲುವಾಗಿ ನೇಪಾಳದಿಂದ ತರಿಸಲಾಗಿರುವ ವಿಶೇಷ ಶಿಲೆಗಳು ಉತ್ತರ ಪ್ರದೇಶದ ಅಯೋಧ್ಯಾವನ್ನು ಬುಧವಾರ ರಾತ್ರಿ ತಲುಪಿದವು. ಈ ಶಿಲೆಗಳಿಂದ ತಯಾರಿಸಲಾಗುವ ವಿಗ್ರಹಗಳನ್ನೇ ಇಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು.
ಈ ಹಿನ್ನೆಲೆಯಲ್ಲಿ ಅಯೋಧ್ಯಾದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. 51 ಅರ್ಚಕರು ಪೂಜೆ ನೆರವೇರಿಸಿದರು. ಬಳಿಕ ಶಿಲೆಯನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಮಂಡಳಿಗೆ ಒಪ್ಪಿಸಲಾಯಿತು. ನೇಪಾಳದ ಜಾನಕಿ ಮಂದಿರದ ಅರ್ಚಕ ಮಹಾಂತ್ ತಾಪೇಶ್ವರ್ ದಾಸ್ ಅವರು ರಾಮ ಮಂದಿರ ಮಂಡಳಿಯ ಚಂಪತ್ ರಾಜ್ ಅವರಿಗೆ ಶಿಲೆಗಳನ್ನು ಹಸ್ತಾಂತರಿಸಿದರು ಎಂದು ಅಧಿಕಾರಿಗಳು ತಿಳಿಸಿದರು.
ಈ ಶಿಲೆಗಳಲ್ಲಿ ರಾಮನ ಬಾಲರೂಪವನ್ನು ಕೆತ್ತಲಾಗುತ್ತದೆ. ಮುಂದಿನ ವರ್ಷ ಜನವರಿಯಲ್ಲಿ ಈ ಮೂರ್ತಿಗಳು ತಯಾರಾಗಿರುತ್ತವೆ.
ಈ ಶಿಲೆಗಳು 6 ಕೋಟಿ ವರ್ಷಗಳಷ್ಟು ಹಳೆಯವು. ಇವು ನೇಪಾಳದ ಸಾಲಿಗ್ರಾಮ ಬಳಿ ಗಂಡಕಿ ನದಿಯಲ್ಲಿ ದೊರೆತಿವೆ. ಒಂದು ಶಿಲೆಯು 26 ಟನ್ ತೂಕವಿದ್ದರೆ ಮತ್ತೊಂದು ಶಿಲೆ 14 ಟನ್ ತೂಕವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.