ಲಖನೌ: ಅಖಿಲೇಶ್ಗೆ ಮತ ನೀಡುತ್ತೇನೆ ಎಂದು ಹೇಳಿದ ಅಂಗವಿಕಲ ಯುವಕನನ್ನು ಬಿಜೆಪಿ ನಾಯಕರೊಬ್ಬರು ದಬಾಯಿಸಿ, ಆತನ ಬಾಯಿಗೆಬೆತ್ತ ತುರುಕಿಸಲು ಯತ್ನಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವಿಡಿಯೊದಲ್ಲಿ ಏನಿದೆ?
ಉತ್ತರ ಪ್ರದೇಶದ ಸಂಭಾಲ್ ಎಂಬಲ್ಲಿ ಬಿಜೆಪಿ ನಾಯಕ ಮೊಹಮ್ಮದ್ ಮಿಯಾ ರಸ್ತೆಯಲ್ಲಿ ಸಾಗುತ್ತಿದ್ದಾಗ ಅಂಗವಿಕಲ ಯುವಕನೊಬ್ಬ ಬಿಜೆಪಿ ನಾಯಕರ ಬಗ್ಗೆ ಏನೋ ಹೇಳಿದ್ದಾನೆ. ಆಗ ಮೊಹಮ್ಮದ್ ಮಿಯಾ ಆತನನ್ನು ಅಲ್ಲಿಂದ ಬೈದು ದೂರ ಓಡಿಸಿ, ಆತನ ಬಾಯಿಗೆ ಬೆತ್ತ ತುರುಕಿಸಲು ಯತ್ನಿಸಿದ್ದಾರೆ.ಅಲ್ಲಿಂದ ಕುಂಟುತ್ತಾ ಸಾಗಿದ ಯುವಕ ವೋಟ್ ದೂಂಗ ಅಖಿಲೇಶ್ ಕೋ (ಅಖಿಲೇಶ್ಗೆ ಮತ ನೀಡುವೆ) ಎಂದು ಹೇಳುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಈ ವಿಡಿಯೊವನ್ನು ಟೈಮ್ಸ್ ಆಫ್ ಇಂಡಿಯಾದ ಪತ್ರಕರ್ತ ಪೀಯೂಷ್ ರೈ ಟ್ವೀಟ್ ಮಾಡಿದ್ದಾರೆ.
ಪೊಲೀಸ್ ಏನಂತಾರೆ?
ಈ ಪ್ರಕರಣದ ಬಗ್ಗೆ ಜನ್ಸತ್ತಾ ಪತ್ರಿಕೆಗೆ ಪ್ರತಿಕ್ರಿಯಿಸಿರುವ ಪೊಲೀಸರು, ಅಂಗವಿಕಲ ವ್ಯಕ್ತಿ ಮದ್ಯದ ನಶೆಯಲ್ಲಿದ್ದನು.ಆತ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಆದಿತ್ಯನಾಥ ಯೋಗಿಗೆ ಬೈದಿದ್ದಾನೆ.ಇಲ್ಲಿಯವರೆಗೆ ಆ ಅಂಗವಿಕಲ ವ್ಯಕ್ತಿಯ ಕಡೆಯಿಂದ ಯಾವುದೇ ದೂರು ದಾಖಲಾಗಿಲ್ಲ.ಹಾಗೇನಾದರೂ ದೂರು ಬಂದರೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು.
ಬಿಜೆಪಿ ಹೇಳಿದ್ದೇನು?
ನಮ್ಮ ಪಕ್ಷದ ನಾಯಕರಿಂದ ಈ ರೀತಿ ಕೃತ್ಯ ನಡೆದಿದ್ದರೆ, ಆ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಸ್ಥಳೀಯ ಮಾಧ್ಯಮವೊಂದರಲ್ಲಿ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.