ಆಟೊ ಚಾಲಕನನ್ನು ಥಳಿಸುತ್ತಿರುವ ದೃಶ್ಯ
Credit: Instagram @/spsc358
ಪಾಲ್ಘರ್: ಮರಾಠಿ ವಿರೋಧಿ ಹೇಳಿಕೆ ನೀಡಿದ್ದಕ್ಕಾಗಿ ಆಟೊ ಚಾಲಕನನ್ನು ಉದ್ಧವ್ ಠಾಕ್ರೆ ನೇತೃತ್ವದ ಶಿವ ಸೇನಾ (ಯುಬಿಟಿ) ಕಾರ್ಯಕರ್ತರು ಶನಿವಾರ ಮನಸೋಇಚ್ಛೆ ಥಳಿಸಿದ್ದಾರೆ.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಿರಾರ್ ರೈಲು ನಿಲ್ದಾಣ ಸಮೀಪ ಮಹಿಳೆಯರು ಸೇರಿದಂತೆ ಕಾರ್ಯಕರ್ತರ ಗುಂಪೊಂದು ಹಲ್ಲೆ ನಡೆಸಿದ್ದು, ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಿತ್ತು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದು, ರಾಜ್ಯದಲ್ಲಿ ಭಾಷಾ ವಿಷಯದ ವಿವಾದಕ್ಕೆ ಕಾರಣವಾಗಿದೆ.
‘ಆಟೊ ಚಾಲಕನನ್ನು ಥಳಿಸುತ್ತಿರುವ ವಿಡಿಯೊ ಲಭ್ಯವಾಗಿದೆ. ಆದರೆ, ಈ ವಿಚಾರವಾಗಿ ಯಾವುದೇ ಅಧಿಕೃತ ದೂರು ಬಂದಿಲ್ಲ. ಹೀಗಾಗಿ, ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಆಟೊ ಚಾಲಕನಿಗೆ ತಕ್ಕ ಪಾಠ ಕಲಿಸಲಾಗಿದೆ. ಮಹಾರಾಷ್ಟ್ರ ಹಾಗೂ ಮರಾಠಿ ಭಾಷೆಯನ್ನು ಅವಮಾನಿಸುವ ಯಾರಿಗಾದರೂ ನಿಜವಾದ ಶಿವಸೇನಾ ಶೈಲಿಯಲ್ಲಿ ಉತ್ತರ ನೀಡುತ್ತೇವೆ’ ಎಂದು ಶಿವಸೇನಾ (ಯುಬಿಟಿ) ವಿರಾರ್ ನಗರ ಘಟಕದ ಮುಖ್ಯಸ್ಥ ಉದಯ್ ಜಾಧವ್ ಎಚ್ಚರಿಕೆ ನೀಡಿದ್ದಾರೆ.
ವಿರಾರ್ ಪ್ರದೇಶದಲ್ಲಿ ವಾಸವಾಗಿರುವ ಆಟೊ ಚಾಲಕ, ಮಹಾರಾಷ್ಟ್ರ, ಮರಾಠಿ ಭಾಷೆ ಹಾಗೂ ಮರಾಠಿ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾನೆಂದು ಆರೋಪಿಸಲಾಗಿದೆ. ಆತ ಮಾತನಾಡಿರುವ ವಿಡಿಯೊ ಹಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು.
ಠಾಣೆ ಜಿಲ್ಲೆಯ ಮಿರಾ ರಸ್ತೆಯಲ್ಲಿ ಸಿಹಿ ತಿನಿಸುಗಳ ಅಂಗಡಿ ಮಾಲೀಕರನ್ನು ರಾಜ್ ಠಾಕ್ರೆ ನೇತೃತ್ವದ ಎಂಎನ್ಎಸ್ನ ಕಾರ್ಯಕರ್ತರು ಥಳಿಸಿದ 15 ದಿನಗಳ ನಂತರ ಈ ಘಟನೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.