ಕಾಂಗ್ರೆಸ್ ಪಕ್ಷದ ಧ್ವಜ
ಮುಂಬೈ: 'ಇಂಡಿಯಾ' ಮೈತ್ರಿಕೂಟದ ಸ್ಥಿತಿಗತಿ ಕುರಿತು ಕಾಂಗ್ರೆಸ್ ಮಾತನಾಡಬೇಕು ಎಂದು ಶಿವಸೇನಾ (ಯುಬಿಟಿ) ಒತ್ತಾಯಿಸಿದೆ.
ಶಿವಸೇನಾ (ಯುಬಿಟಿ) ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ, ಕಾಂಗ್ರೆಸ್ ಪಕ್ಷವು ಅಹಮದಾಬಾದ್ನಲ್ಲಿ ನಡೆಸಿದ ಸಭೆಯಲ್ಲಿ ತನ್ನ ಬಗ್ಗೆಯಷ್ಟೇ ಮಾತನಾಡಿದೆ. ಇಂಡಿಯಾ ಕುರಿತು ಎಲ್ಲಿಯೂ ಚರ್ಚೆಯಾಗಿಲ್ಲ ಎಂದು ಹೇಳಿದೆ.
'ಲೋಕಸಭಾ ಚುನಾವಣೆ ನಂತರ ಇಂಡಿಯಾ ಬಣ ಎಲ್ಲಿದೆ ಎಂಬ ಪ್ರಶ್ನೆಗಳು ಎದ್ದಿವೆ. ಕಾಂಗ್ರೆಸ್ ಪಕ್ಷವು, ಅಹಮದಾಬಾದ್ ಸಭೆಯಲ್ಲಿ ಉತ್ತರಿಸಬೇಕಿತ್ತು' ಎಂದು ಉಲ್ಲೇಖಿಸಲಾಗಿದೆ.
'ಮೈತ್ರಿಕೂಟಕ್ಕೆ ಏನಾಯಿತು? ಅದು ಹೂತು ಹೋಯಿತೇ ಅಥವಾ ಗಾಳಿಯಲ್ಲಿ ಲೀನವಾಯಿತೇ? ಎಂಬ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿ ಕಾಂಗ್ರೆಸ್ ಅಧ್ಯಕ್ಷರ ಮೇಲಿದೆ' ಎಂದೂ ಹೇಳಲಾಗಿದೆ.
ಬಿಹಾರ, ಗುಜರಾತ್ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ನ ನಿಲುವು ಏನು ಎಂಬುದನ್ನೂ ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿರುವ ಸೇನಾ, 'ಇಲ್ಲವಾದರೆ, ಮತ್ತೊಮ್ಮೆ ಸೋಲನ್ನು ಸ್ವಾಗತಿಸಲು ಪಕ್ಷ ಸಿದ್ಧವಿದೆಯೇ' ಎಂದೂ ಕೇಳಿದೆ.
ಕಾಂಗ್ರೆಸ್ ಪಕ್ಷವು ಗುಜರಾತ್ನಲ್ಲಿ ಏಪ್ರಿಲ್ 8–9ರಂದು ಸಭೆ ನಡೆಸಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.