ADVERTISEMENT

ತೆಲಂಗಾಣ ಸಿಎಂ ಕಾಲಿಗೆರಗಿದ ಸಿದ್ದಿಪೇಟ್‌ ಜಿಲ್ಲಾಧಿಕಾರಿ; ವಿರೋಧ ಪಕ್ಷಗಳ ಟೀಕೆ

‘ಸಿಎಂ ತಂದೆ ಸಮಾನರು, ಅದಕ್ಕೆ ಅವರ ಆಶೀರ್ವಾದ ಪಡೆದೆ‘– ಜಿಲ್ಲಾಧಿಕಾರಿ ವೆಂಕಟರಾಮ ರೆಡ್ಡಿ

ಪಿಟಿಐ
Published 21 ಜೂನ್ 2021, 10:37 IST
Last Updated 21 ಜೂನ್ 2021, 10:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹೈದರಾಬಾದ್‌: ಜನ ಪ್ರತಿನಿಧಿಗಳು ಮತ್ತು ಉನ್ನತ ಅಧಿಕಾರಿಗಳ ಎದುರಿನಲ್ಲಿ ಸಿದ್ದಿಪೇಟ್‌ ಜಿಲ್ಲಾಧಿಕಾರಿ ವೆಂಕಟರಾಮ ರೆಡ್ಡಿ ಅವರು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ಅವರ ಕಾಲಿಗೆರಗುವ ಮೂಲಕ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಜಿಲ್ಲಾಧಿಕಾರಿ ವೆಂಕಟರಾಮ ರೆಡ್ಡಿಯವರ ಈ ಕ್ರಮವನ್ನು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಟೀಕಿಸಿದ್ದಾರೆ.

ಘಟನೆ ವಿವರ:ಕೆಲವು ಸರ್ಕಾರಿ ಕಚೇರಿಗಳನ್ನು ಉದ್ಘಾಟಿಸಲು ಭಾನುವಾರ ಸಿದ್ಧಿಪೇಟ್‌ಗೆ ಆಗಮಿಸಿದ್ದ ಮುಖ್ಯಮಂತ್ರಿ ಚಂದ್ರೇಶೇಖರ್ ರಾವ್ ಅವರು, ಜಿಲ್ಲಾಧಿಕಾರಿ ಕಚೇರಿಯನ್ನೂ ಉದ್ಘಾಟಿಸಿದರು. ಕಚೇರಿ ಉದ್ಘಾಟನೆ ನಂತರ ಸಾಂಕೇತಿಕವಾಗಿ ಜಿಲ್ಲಾಧಿಕಾರಿ ಕುರ್ಚಿ ಮೇಲೆ ಕುಳಿತ ವೆಂಕಟರಾಮ ರೆಡ್ಡಿ, ತಕ್ಷಣ ಎದ್ದು ನಿಂತು ಪಕ್ಕದಲ್ಲಿದ್ದ ಸಿಎಂ ಚಂದ್ರಶೇಖರ್ ಅವರ ಕಾಲುಮುಟ್ಟಿ ನಮಸ್ಕರಿಸಿದರು. ಈದೃಶ್ಯದ ತುಣುಕು ವೈರಲ್ ಆಗಿತ್ತು.

ADVERTISEMENT

ಈ ಕುರಿತು ಭಾನುವಾರ ರಾತ್ರಿ ಹೇಳಿಕೆ ಬಿಡುಗಡೆ ಮಾಡಿದ ವೆಂಕಟರಾಮ ರೆಡ್ಡಿ ಅವರು, ‘ಮುಖ್ಯಮಂತ್ರಿ ಚಂದ್ರಶೇಖರ್ ಅವರು ನನಗೆ ತಂದೆ ಇದ್ದಂತೆ‘ ಎಂದು ಘಟನೆಯನ್ನು ಸಮರ್ಥಿಸಿಕೊಂಡರು. ‘ಇಂಥ ಶುಭ ಸಂದರ್ಭಗಳಲ್ಲಿ ಹಿರಿಯರ ಆಶೀರ್ವಾದ ಪಡೆಯುವುದು ತೆಲಂಗಾಣದ ಸಂಸ್ಕೃತಿಯ ಒಂದು ಭಾಗ. ಹಾಗಾಗಿ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ತಂದೆ ಸಮಾನರಾದ ಮುಖ್ಯಮಂತ್ರಿಯವರಿಂದ ಆಶೀರ್ವಾದ ಪಡೆದೆ‘ ಎಂದು ಹೇಳಿಕೆಯಲ್ಲಿ ತಿಳಿಸಿದ್ದರು.

ಈ ಘಟನೆಗೆ ಪ್ರತಿಕ್ರಿಯಿಸಿರುವ ತೆಲಂಗಾಣ ಬಿಜೆಪಿಯ ಮುಖ್ಯ ವಕ್ತಾರ ಕೆ. ಕೃಷ್ಣ ಸಾಗರ್ ರಾವ್‌, ‘ಇಂತಹ ವರ್ತನೆಗಳು ಅವರೊಬ್ಬ ಹಿರಿಯ ಆಡಳಿತ ಅಧಿಕಾರಿಯಾಗಿರಲು ಅನರ್ಹ ಎಂದು ತೋರಿಸುತ್ತವೆ’ ಎಂದು ಹೇಳಿದ್ದಾರೆ.

ಎಐಸಿಸಿ ವಕ್ತಾರ ಶ್ರವನ್ ದಾಸೋಜು ಪ್ರತಿಕ್ರಿಯಿಸಿ, ‘ಜಿಲ್ಲಾದಿಕಾರಿಯವರು ಮುಖ್ಯಮಂತ್ರಿಗೆ ನಮಸ್ಕರಿಸುವುದು ಅಸಹ್ಯಕರ ಮತ್ತು ಸ್ವೀಕಾರಾರ್ಹವಲ್ಲದ ಸಂಗತಿ‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.